ಸಿಖ್ ವಿರೋಧಿ ಗಲಭೆಯನ್ನು ‘ಜನಾಂಗೀಯ ಹತ್ಯೆ’ ಎಂಬುದಾಗಿ ಪರಿಗಣಿಸಿ
ಜಗ್ಮೀತ್ ಸಿಂಗ್ ನೇತೃತ್ವದ ಪಕ್ಷದಿಂದ ಕೆನಡ ಸರಕಾರಕ್ಕೆ ಮನವಿ
ಟೊರಾಂಟೊ (ಕೆನಡ), ನ. 2: ಭಾರತದಲ್ಲಿ 1984ರಲ್ಲಿ ನಡೆದ ಸಿಖ್ ವಿರೋಧಿ ಗಲಭೆಯನ್ನು ‘ಜನಾಂಗೀಯ ಹತ್ಯೆ’ ಎಂಬುದಾಗಿ ಪರಿಗಣಿಸುವಂತೆ ಕೆನಡದ ಪ್ರತಿಪಕ್ಷ ’ನ್ಯೂ ಡೆಮಾಕ್ರಟಿಕ್ ಪಾರ್ಟಿ (ಎನ್ಡಿಪಿ)’ ಸರಕಾರವನ್ನು ಒತ್ತಾಯಿಸಿದೆ.
1984ರಲ್ಲಿ ಇಂದಿರಾ ಗಾಂಧಿ ಹತ್ಯೆ ಸಂಭವಿಸಿದ ಬಳಿಕ ದಿಲ್ಲಿಯಲ್ಲಿ ಸಿಖ್ ವಿರೋಧಿ ಗಲಭೆ ಸ್ಫೋಟಿಸಿತ್ತು.
‘‘ದಿಲ್ಲಿ ವಿಧಾನಸಭೆ ಮತ್ತು ಒಂಟಾರಿಯೊ ಶಾಸನ ಸಭೆಗಳು ಈ ಹತ್ಯಾಕಾಂಡವನ್ನು ಜನಾಂಗೀಯ ಹತ್ಯೆ ಎಂಬುದಾಗಿ ಗುರುತಿಸಿವೆ. ಒಂದು ದಿನ ಹೌಸ್ ಆಫ್ ಕಾಮನ್ಸ್ ಮತ್ತು ಈ ಸರಕಾರ ಕೂಡ ಇದೇ ಮಾದರಿಯನ್ನು ಅನುಸರಿಸುವುದು ಎಂಬ ಭರವಸೆಯನ್ನು ನಾನು ಹೊಂದಿದ್ದೇನೆ’’ ಎಂದು ಪಕ್ಷದ ಸಂಸದೀಯ ನಾಯಕ ಗಯ್ ಕ್ಯಾರೊನ್ ಹೌಸ್ ಆಫ್ ಕಾಮನ್ಸ್ನಲ್ಲಿ ಹೇಳಿದರು.
ಕೆನಡದ ಮೂರು ಪ್ರಮುಖ ರಾಜಕೀಯ ಪಕ್ಷಗಳ ಪೈಕಿ ಒಂದಾಗಿರುವ ಎನ್ಡಿಪಿಯ ನೇತೃತ್ವವನ್ನು ಜಗ್ಮೀತ್ ಸಿಂಗ್ ವಹಿಸಿದ್ದಾರೆ.
1985ರಲ್ಲಿ ಏರ್ ಇಂಡಿಯಾ ವಿಮಾನ 182ರಲ್ಲಿ ನಡೆದ ಬಾಂಬ್ ಸ್ಫೋಟದ ರೂವಾರಿ ತಲ್ವಿಂದರ್ ಸಿಂಗ್ ಪರ್ಮಾರ್ನನ್ನು ಕೆನಡದ ಕೆಲವು ಗುರುದ್ವಾರಗಳು ಹುತಾತ್ಮ ಎಂಬುದಾಗಿ ಬಣ್ಣಿಸಿರುವುದನ್ನು ಖಂಡಿಸಲು ನಿರಾಕರಿಸುವ ಮೂಲಕ ಅವರು ವಿವಾದಕ್ಕೆ ಗುರಿಯಾಗಿರುವುದನ್ನು ಸ್ಮರಿಸಬಹುದಾಗಿದೆ.