ಕಲ್ಲಂಗಡಿ ಹಣ್ಣಿನಿಂದ ಆದ ಗಾಯಕ್ಕೆ 49 ಕೋಟಿ ರೂಪಾಯಿ ಪರಿಹಾರ !
ನ್ಯೂಯಾರ್ಕ್, ನ.13: ವಾಲ್ಮಾರ್ಟ್ ಮಳಿಗೆಯಲ್ಲಿ ಕಲ್ಲಂಗಡಿ ಹಣ್ಣು ಖರೀದಿಸುವ ಸಂದರ್ಭ ತನ್ನ ಪೃಷ್ಠದ ಭಾಗಕ್ಕೆ ಗಾಯವಾಗಿದ್ದು ಪರಿಹಾರ ಕೊಡಿಬೇಕು ಎಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ವ್ಯಕ್ತಿಗೆ ನ್ಯಾಯಾಲಯ 7.5 ಮಿಲಿಯನ್ ಡಾಲರ್ (49 ಕೋಟಿ ರೂ.) ಪರಿಹಾರ ನೀಡುವಂತೆ ಆದೇಶಿಸಿದೆ.
2015ರಲ್ಲಿ ಕಲ್ಲಂಗಡಿ ಖರೀದಿಸಲು ತೆರಳಿದ್ದ 61ರ ಹರೆಯದ ಹೆನ್ರಿ ವಾಕರ್ ಎಂಬ ವ್ಯಕ್ತಿಯ ಕಾಲು ಕಲ್ಲಂಗಡಿ ಹಣ್ಣಿನ ಪೆಟ್ಟಿಗೆಯಡಿ ಇದ್ದ ಜಾಹೀರಾತು ಹಲಗೆಯಡಿ ಸಿಲುಕಿದ ಪರಿಣಾಮ ಕೆಳಗೆ ಬಿದ್ದು ಗಾಯವಾಗಿದೆ. ಅಂಗಡಿಯವರು , ಪೆಟ್ಟಿಗೆಯ ಹಲಗೆಯನ್ನು ಸರಿಯಾಗಿ ಮುಚ್ಚದ ಕಾರಣ ವಾಕರ್ ಗಾಯಗೊಂಡಿದ್ದು ಆತನಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆತನ ವಕೀಲರು ನ್ಯಾಯಾಲಯದಲ್ಲಿ ಕೋರಿಕೆ ಸಲ್ಲಿಸಿದ್ದರು.
ಆದರೆ ಜಾಹೀರಾತು ಫಲಕದ ಹಲಗೆ ಅಪಾಯಕಾರಿ ಸ್ಥಿತಿಯಲ್ಲಿರಲಿಲ್ಲ. ಗ್ರಾಹಕನದ್ದೇ ತಪ್ಪು ಎಂದು ವಾಲ್ಮಾರ್ಟ್ ವಾದ ಮಂಡಿಸಿತ್ತು. ಆದರೆ ನ್ಯಾಯಾಲಯ ವಾಕರ್ ಪರ ತೀರ್ಪು ನೀಡಿದೆ. ತೀರ್ಪಿನಿಂದ ಅಸಮಾಧಾನವಾಗಿದೆ. ಪರಿಹಾರಧನದ ಮೊತ್ತ ಕೂಡಾ ಬಹಳಷ್ಟು ಹೆಚ್ಚಾಗಿದೆ. ವಿಶ್ವದಾದ್ಯಂತ ಇರುವ ವಾಲ್ಮಾರ್ಟ್ ಮಳಿಗೆಯಲ್ಲಿ ಇದೇ ರೀತಿ ಜಾಹೀರಾತು ಫಲಕವಿದೆ. ಆದರೆ ಎಲ್ಲೂ ಕೂಡಾ ಗ್ರಾಹಕರು ಗಾಯಗೊಂಡಿಲ್ಲ. 2015ರಿಂದಲೂ ಕಲ್ಲಂಗಡಿ ಹಣ್ಣನ್ನು ಇದೇ ರೀತಿ ಮಾರಾಟಕ್ಕೆ ಇಡಲಾಗುತ್ತಿದೆ. ಕಲ್ಲಂಗಡಿ ಬೆಳೆಯುವವರು ಈ ರೀತಿ ಪ್ಯಾಕ್ ಮಾಡಿ ಅಂಗಡಿಗೆ ತಲುಪಿಸುತ್ತಾರೆ. ಇದರಲ್ಲಿ ತಮ್ಮ ತಪ್ಪೇನೂ ಇಲ್ಲ ಎಂದು ತಿಳಿಸಿರುವ ವಾಲ್ಮಾರ್ಟ್ ಸಂಸ್ಥೆ, ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ.