ದಕ್ಷಿಣ ಆಫ್ರಿಕಾ: ಭಾರತೀಯ ಕಾನ್ಸುಲರ್ ಜನರಲ್ ಮನೆಯಲ್ಲಿ ದರೋಡೆ
5 ವರ್ಷದ ಮಗನನ್ನು ಒತ್ತೆಯಾಳಾಗಿರಿಸಿ ಕೃತ್ಯ
ಜೊಹಾನ್ಸ್ಬರ್ಗ್, ನ. 20: ಆಘಾತಕಾರಿ ಭದ್ರತಾ ಲೋಪವೊಂದರಲ್ಲಿ, ದಕ್ಷಿಣ ಆಫ್ರಿಕದಲ್ಲಿ ಭಾರತೀಯ ಕಾನ್ಸುಲರ್ ಜನರಲ್ ಆಗಿರುವ ಶಶಾಂಕ್ ವಿಕ್ರಮ್ರ ಡರ್ಬನ್ ನಿವಾಸವನ್ನು ಸಶಸ್ತ್ರ ದರೋಡೆಕೋರರು ಗುರುವಾರ ದರೋಡೆ ಮಾಡಿದ್ದಾರೆ.
ಎಂಟು ದರೋಡೆಕೋರರು ಕಾನ್ಸುಲರ್ ಜನರಲ್ರ ಐದು ವರ್ಷದ ಮಗನನ್ನು ಬಂದೂಕು ತೋರಿಸಿ ಒತ್ತೆಯಾಳಾಗಿ ಇಟ್ಟುಕೊಂಡಿದ್ದರು.
ದಕ್ಷಿಣ ಆಫ್ರಿಕದ ‘ವಿಐಪಿ ಯೂನಿಟ್’ ಎಂಬ ಖಾಸಗಿ ಸಶಸ್ತ್ರ ಭದ್ರತಾ ಕಂಪೆನಿಯ ಭದ್ರತೆಯ ಹೊರತಾಗಿಯೂ, ಡರ್ಬನ್ನ ‘ಮಾರ್ನಿಂಗ್ಸೈಡ್’ ಪ್ರದೇಶದಲ್ಲಿರುವ ಭಾರತೀಯ ರಾಜತಾಂತ್ರಿಕರ ನಿವಾಸ ’ಇಂಡಿಯಾ ಹೌಸ್’ನ್ನು ದರೋಡೆಕೋರರು ಅಪರಾಹ್ನ ದರೋಡೆಗೈದರು ಎಂದು ‘ಇಂಡಿಪೆಂಡೆಂಟ್ ಆನ್ಲೈನ್’ ವರದಿ ಮಾಡಿದೆ.
ಎಚ್ಚರಿಕೆ ಸಂದೇಶ ಹೊರಟ 15 ನಿಮಿಷಗಳ ಬಳಿಕ ಸಶಸ್ತ್ರ ಪೊಲೀಸರು ಬಂದು ಸಿಸಿಟಿವಿ ಕ್ಯಾಮರದ ಚಿತ್ರಗಳನ್ನು ತೆಗೆದುಕೊಂಡು ಹೋದರು.
ದರೋಡೆಕೋರರು ಸಂಜೆ 4 ಗಂಟೆಗೆ ಮನೆಗೆ ನುಗ್ಗಿದಾಗ ಒಬ್ಬ ಭದ್ರತಾ ಸಿಬ್ಬಂದಿ ಮನೆಯಲ್ಲಿ ಇದ್ದನು. ಡ್ರೈವ್ವೇ ಗೇಟ್ನಲ್ಲಿದ್ದ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ದರೋಡೆಕೋರರು ಮನೆಯೊಳಗೆ ನುಗ್ಗಿದರು.
‘‘ವಿಕ್ರಮ್ರ ಪತ್ನಿ ಮೇಘಾ ಸಿಂಗ್ ಮತ್ತು ದಂಪತಿಯ ಇಬ್ಬರು ಚಿಕ್ಕ ಮಕ್ಕಳು ಮನೆಯಲ್ಲಿದ್ದರು. ಅವರ ಐದು ವರ್ಷದ ಮಗನ ತಲೆಗೆ ಬಂದೂಕು ಹಿಡಿದ ದರೋಡೆಕೋರರು ಹಣ ಮತ್ತು ಚಿನ್ನ ಕೊಡುವಂತೆ ಬಲವಂತಪಡಿಸಿದರು’’ ಎಂದು ವೆಬ್ಸೈಟ್ ತಿಳಿಸಿದೆ.
ಮನೆಯಲ್ಲಿದ್ದ ಕೆಲಸದಾಕೆ ಅಲಾರಂ ಗುಂಡಿ ಒತ್ತಿದಾಗ ದರೋಡೆಕೋರರು ಆಕೆಗೆ ಹಲ್ಲೈಗೈದರು ಹಾಗೂ ಅದನ್ನು ಸ್ಥಗಿತಗೊಳಿಸುವಂತೆ ಸೂಚಿಸಿದರು.
ಮನೆಯ ಮಹಡಿಯಲ್ಲಿದ್ದ ಮೇಘಾ ಮತ್ತು ಇಬ್ಬರು ಮಕ್ಕಳು ಟಿವಿ ನೋಡುತ್ತಿದ್ದರು. ಮೇಘಾ ಬಾಗಿಲನ್ನು ಮುಚ್ಚಿದರಾದರೂ, ಕಬ್ಬಿಣದ ರಾಡ್ನ ಸಹಾಯದಿಂದ ದರೋಡೆಕೋರರು ಬಾಗಿಲನ್ನು ಒಡೆದು ತೆರೆದರು.
ಅಲ್ಲಿಂದ ಕೋಣೆಗೆ ಒಡಿದ ಮೇಘಾ ಮತ್ತೊಂದು ಎಚ್ಚರಿಕೆಯ ಗಂಟೆ ಒತ್ತಿದ್ದರು ಹಾಗೂ ಗಂಡನಿಗೆ ಕರೆ ಮಾಡಿದರು. ಪೊಲೀಸರು ಬರುವ ಮೊದಲೇ ವಿಕ್ರಮ್ ಮನೆಗೆ ಧಾವಿಸಿ ಬಂದರು.
ಆಗ ದರೋಡೆಕೋರರು ಒಂದು ಮೊಬೈಲ್ ಫೋನ್ ಮತ್ತು ಕೆಲವು ಸಣ್ಣಪುಟ್ಟ ವಸ್ತುಗಳನ್ನು ತೆಗೆದುಕೊಂಡು ಪರಾರಿಯಾದರು.
ದಕ್ಷಿಣ ಆಫ್ರಿಕ ಸರಕಾರದೊಂದಿಗೆ ಪ್ರಸ್ತಾಪ: ಭಾರತ
ಭಾರತದ ಕಾನ್ಸುಲ್ ಜನರಲ್ ನಿವಾಸದಲ್ಲಿ ನಡೆದ ದರೋಡೆಯ ಬಗ್ಗೆ ದಕ್ಷಿಣ ಆಫ್ರಿಕ ಸರಕಾರದೊಂದಿಗೆ ಪ್ರಸ್ತಾಪಿಸಲಾಗಿದೆ ಹಾಗೂ ಪ್ರಸಕ್ತ ತನಿಖೆ ನಡೆಯುತ್ತಿದೆ ಎಂದು ಭಾರತದ ವಿದೇಶ ವ್ಯವಹಾರಗಲ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ರವಿವಾರ ಹೇಳಿದ್ದಾರೆ.