ಶರೀಫ್ ಕುಟುಂಬ, ಇಮ್ರಾನ್ಗೆ ಸುಪ್ರೀಂ ಕೋರ್ಟ್ನಿಂದ ನೆಮ್ಮದಿ
ಇಸ್ಲಾಮಾಬಾದ್, ಡಿ. 15: ಮಾಜಿ ಪ್ರಧಾನಿ ನವಾಝ್ ಶರೀಫ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧದ 120 ಕೋಟಿ ರೂ. ಕಪ್ಪು ಹಣ ಬಿಳುಪು ಪ್ರಕರಣವನ್ನು ಮತ್ತೆ ತೆರೆಯಬೇಕು ಎಂಬ ಪಾಕಿಸ್ತಾನದ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ನ್ಯಾಶನಲ್ ಅಕೌಂಟಬಿಲಿಟಿ ಬ್ಯೂರೋ (ಎನ್ಎಬಿ)ದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
ಅದೇ ವೇಳೆ, ತನ್ನ ಸಂಪತ್ತು ಘೋಷಣೆ ಮಾಡದ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ರ ಸಂಸತ್ ಸದಸ್ಯತ್ವವನ್ನು ರದ್ದು ಮಾಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನೂ ಪಾಕಿಸ್ತಾನದ ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.
ಈ ಪ್ರಕರಣಗಳಲ್ಲಿ ವ್ಯತಿರಿಕ್ತ ತೀರ್ಪುಗಳು ಬಂದಿದ್ದರೆ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಮತ್ತು ಪಂಜಾಬ್ ಮುಖ್ಯಮಂತ್ರಿ ಶೆಹ್ಬಾಝ್ ಶರೀಫ್ ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತಿರಲಿಲ್ಲ.
ಜುಲೈ ತಿಂಗಳಲ್ಲಿ ಪಾಕ್ ಸುಪ್ರೀಂ ಕೋರ್ಟ್ ನವಾಝ್ ಶರೀಫ್ರನ್ನು ಪ್ರಧಾನಿ ಹುದ್ದೆಯಿಂದ ಅನರ್ಹಗೊಳಿಸಿರುವ ಹಿನ್ನೆಲೆಯಲ್ಲಿ, ಮುಂದಿನ ಸಂಸದೀಯ ಚುನಾವಣೆಯಲ್ಲಿ ಅವರ ಸಹೋದರ ಶೆಹ್ಬಾಝ್ ಶರೀಫ್ ಪಿಎಂಎಲ್-ಎನ್ ಪಕ್ಷದ ಪ್ರಧಾನಿ ಅಭ್ಯರ್ಥಿಯೆನ್ನಲಾಗಿದೆ.