ಒಂಟಾರಿಯೊದ ಗುರುದ್ವಾರಗಳಿಗೆ ಭಾರತೀಯ ಅಧಿಕಾರಿಗಳಿಗೆ ಪ್ರವೇಶ ನಿಷೇಧ
ಟೊರಾಂಟೊ (ಕೆನಡ), ಡಿ. 2: ಭಾರತವನ್ನು ಪ್ರತಿನಿಧಿಸುವ ಅಧಿಕಾರಿಗಳು ಹಾಗೂ ಅದರ ರಾಜತಾಂತ್ರಿಕರಿಗೆ ಕೆನಡದ ಒಂಟಾರಿಯೊ ರಾಜ್ಯದಲ್ಲಿರುವ ಗುರುದ್ವಾರಗಳಿಗೆ ಪ್ರವೇಶ ನಿರಾಕರಿಸಲು ರಾಜ್ಯದ ಹಲವಾರು ಗುರುದ್ವಾರಗಳ ಪ್ರತಿನಿಧಿಗಳನ್ನು ಒಳಗೊಂಡ ಪದಾಧಿಕಾರಿಗಳ ಗುಂಪೊಂದು ನಿರ್ಧರಿಸಿದೆ.
ಟೊರಾಂಟೊದ ಉಪನಗರ ಬ್ರಾಂಪ್ಟನ್ನಲ್ಲಿರುವ ಜೋತ್ ಪ್ರಕಾಶ್ ಗುರುದ್ವಾರದಲ್ಲಿ ಡಿಸೆಂಬರ್ 30ರಂದು ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.
‘‘ಜಮೀನು ಅತಿಕ್ರಮ ಪ್ರವೇಶಕ್ಕೆ ಸಂಬಂಧಿಸಿದ 1990ರ ಕಾನೂನಿನನ್ವಯ ಭಾರತ ಸರಕಾರದ ಅಧಿಕಾರಿಗಳಿಗೆ ಗುರುದ್ವಾರಗಳಿಗೆ ಪ್ರವೇಶ ನಿಷೇಧಿಸುವ ಅಧಿಕಾರವನ್ನು ಈ ಗುರುದ್ವಾರ ಸಾಹಿಬ್ನ ಆಡಳಿತ ಮಂಡಳಿ ಕಾದಿರಿಸಿದೆ. ಭಾರತದ ಚುನಾಯಿತ ಅಧಿಕಾರಿಗಳು, ಭಾರತೀಯ ಕಾನ್ಸುಲರ್ ಅಧಿಕಾರಿಗಳು ಮತ್ತು ಸಿಖ್ ರಾಷ್ಟ್ರ ಮತ್ತು ಸಿಖ್ ಸಂಸ್ಥೆಗಳನ್ನು ಕಡೆಗಣಿಸುವ ಸಂಘಟನೆಗಳ ಸದಸ್ಯರಿಗೆ ಈ ನಿಷೇಧ ಅನ್ವಯವಾಗುತ್ತದೆ’’ ಎಂದು ನಿರ್ಣಯ ಹೇಳಿದೆ.
ಒಂಟಾರಿಯೊ ಗುರುದ್ವಾರ ಸಮಿತಿ (ಒಜಿಸಿ)ಯ ಆಶ್ರಯದಲ್ಲಿ ಸಭೆ ನಡೆದಿದೆ.
‘‘ಭಾರತೀಯ ಕಾನ್ಸುಲರ್ ಮತ್ತು ಭಾರತ ಸರಕಾರದ ಅಧಿಕಾರಿಗಳು ಕೆನಡದ ಸಿಖ್ಖರ ಬದುಕಿನಲ್ಲಿ ನಡೆಸುತ್ತಿರುವ ಹಸ್ತಕ್ಷೇಪಗಳನ್ನು ಗಮನದಲ್ಲಿರಿಸಿ, ಗುರುದ್ವಾರಗಳಿಗೆ ಭಾರತೀಯ ಅಧಿಕಾರಿಗಳಿಗೆ ಪ್ರವೇಶ ನಿರಾಕರಿಸುವ ನಿರ್ಧಾರವನ್ನು ಗುರುದ್ವಾರ ಆಡಳಿತ ಸಮಿತಿಗಳು ಜಂಟಿಯಾಗಿ ತೆಗೆದುಕೊಂಡಿವೆ’’ ಎಂದು ಒಂಟಾರಿಯೊ ಗುರುದ್ವಾರ ಸಮಿತಿಯ ವಕ್ತಾರ ಅಮರ್ಜಿತ್ ಮಾನ್ ಹೇಳಿದ್ದಾರೆ.