ಪಶ್ಚಿಮದ ದೇಶಗಳು ಅಭಿವೃದ್ಧಿಯ ಲಾಭ ಹಂಚಲಿ
ವಿಶ್ವ ಆರ್ಥಿಕ ವೇದಿಕೆ ಸಮ್ಮೇಳನದಲ್ಲಿ ರಘುರಾಮ್ ರಾಜನ್
ಡಾವೋಸ್ (ಸ್ವಿಟ್ಸರ್ಲ್ಯಾಂಡ್), ಜ. 23: ಅಭಿವೃದ್ಧಿಶೀಲ ದೇಶಗಳ ನೆರವಿಲ್ಲದೆ ತಾವು ಹೆಚ್ಚು ದೂರ ಸಾಗಲು ಸಾಧ್ಯವಿಲ್ಲ ಎಂಬುದನ್ನು ಪಾಶ್ಚಿಮಾತ್ಯ ದೇಶಗಳು ಮನಗಾಣಬೇಕು ಎಂದು ಮಾಜಿ ಆರ್ಬಿಐ ಗವರ್ನರ್ ರಘುರಾಮ ರಾಜನ್ ಮಂಗಳವಾರ ಹೇಳಿದ್ದಾರೆ.
ಸಮಸ್ಯೆಯನ್ನು ತಕ್ಷಣ ಬಗೆಹರಿಸದಿದ್ದರೆ ‘ಸಮತೋಲರಹಿತ ಜಗತ್ತಿನ’ ವಿವಾದಗಳನ್ನು ಪರಿಹರಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ ಎಂದು ಅವರು ಎಚ್ಚರಿಸಿದರು.
ಸ್ವಿಟ್ಸರ್ಲ್ಯಾಂಡ್ನ ಹಿಮಾಚ್ಛಾದಿತ ಡಾವೋಸ್ ನಗರದಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಮ್ಮೇಳನದ ಗೋಷ್ಠಿಯೊಂದರಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ತಮ್ಮ ಜನಸಂಖ್ಯೆಗೆ ಪ್ರಾಯವಾಗುತ್ತಿದೆ ಹಾಗೂ ತಮ್ಮ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯು ಅಭಿವೃದ್ಧಿಶೀಲ ದೇಶಗಳಿಂದ ಬರುತ್ತಿದೆ ಎಂಬುದನ್ನು ಪಾಶ್ಚಿಮಾತ್ಯ ದೇಶಗಳು ಅರ್ಥ ಮಡಿಕೊಳ್ಳಬೇಕು ಎಂದು ಯಾವುದೇ ದೇಶವನ್ನು ಹೆಸರಿಸದೆ ಅವರು ಹೇಳಿದರು.
‘‘ಅಭಿವೃದ್ಧಿಶೀಲ ದೇಶಗಳ ಬೆಂಬಲಕ್ಕಾಗಿ ಪಾಶ್ಚಿಮಾತ್ಯ ದೇಶಗಳು ಅವುಗಳ ಬಳಿ ಹೋಗುವಾಗ, ಈ ಮೊದಲು ಯಾಕೆ ಲಾಭಗಳನ್ನು ಹಂಚಿಕೊಳ್ಳಲಿಲ್ಲ ಎಂಬ ಕುರಿತ ಕೆಲವು ಪ್ರಶ್ನೆಗಳಿಗೆ ಅವುಗಳು ಉತ್ತರ ನೀಡಬೇಕಾಗಬಹುದು’’ ಎಂದರು.