ವಿಶ್ವಸಂಸ್ಥೆಯಲ್ಲಿ ಮತ್ತೆ ಕಾಶ್ಮೀರ ವಿವಾದವನ್ನು ಎತ್ತಿದ ಪಾಕಿಸ್ತಾನ
ವಿಶ್ವಸಂಸ್ಥೆ, ಜ. 27: ಭಾರತ ಮತ್ತು ಪಾಕಿಸ್ತಾನಗಳ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡುವುದನ್ನು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟರಸ್ ತಳ್ಳಿಹಾಕಿದ ಕೆಲವೇ ದಿನಗಳಲ್ಲಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನ ಮತ್ತೆ ಕಾಶ್ಮೀರ ವಿವಾದವನ್ನು ಪ್ರಸ್ತಾಪಿಸಿದೆ.
ಮಧ್ಯಪ್ರಾಚ್ಯದ ಪ್ರಸಕ್ತ ಸ್ಫೋಟಕ ಪರಿಸ್ಥಿತಿಯ ಬಗ್ಗೆ ಭದ್ರತಾ ಮಂಡಳಿಯಲ್ಲಿ ಶುಕ್ರವಾರ ಚರ್ಚೆ ನಡೆಯುತ್ತಿದ್ದಾಗ, ವಿಶ್ವಸಂಸ್ಥೆಗೆ ಪಾಕಿಸ್ತಾನದ ಖಾಯಂ ರಾಯಭಾರಿ ಮಲೀಹಾ ಲೋಧಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದರು. ಆದರೆ, ಎಂದಿನಂತೆ ಅದನ್ನು ಯಾರೂ ಪರಿಗಣಿಸಲಿಲ್ಲ.
‘‘ಕಾಶ್ಮೀರ ಸೇರಿದಂತೆ ವಿದೇಶೀಯರ ಆಕ್ರಮಣಕಾರಿ ಆಡಳಿತಗಳಡಿ ಬದುಕುತ್ತಿರುವ ಜನರಿಗೆ ಬೆಂಬಲ ನೀಡುವಂತೆ, ಫೆಲೆಸ್ತೀನೀಯರ ನ್ಯಾಯೋಚಿತ ನ್ಯಾಯೋಚಿತ ಬೇಡಿಕೆಗಳಿಗೆ ಬೆಂಬಲ ನೀಡುವುದನ್ನು ಪಾಕಿಸ್ತಾನ ಮುಂದುವರಿಸುವುದು’’ ಎಂದು ಮಲೀಹಾ ಹೇಳಿದರು.
ಕಾಶ್ಮೀರ ವಿವಾದ ಪರಿಹಾರಕ್ಕೆ ಯಾವುದೇ ತೃತೀಯ ಪಕ್ಷದ ಸಂಧಾನವನ್ನು ಭಾರತ ತಿರಸ್ಕರಿಸಿದೆ, ಆದರೆ, ವಿವಾದ ಬಗೆಹರಿಸಲು ತೃತೀಯ ಪಕ್ಷ ಮಧ್ಯಸ್ಥಿಕೆ ವಹಿಸಬೇಕು ಎಂಬುದಾಗಿ ಪಾಕಿಸ್ತಾನ ನಿರಂತರವಾಗಿ ಒತ್ತಾಯಿಸುತ್ತಾ ಬಂದಿದೆ.