ರಾಜೀವ್, ಭುಟ್ಟೊ ಕಾಶ್ಮೀರ ವಿವಾದ ಬಗೆಹರಿಸಲು ಮುಂದಾಗಿದ್ದರು
ಪಾಕ್ ಮಾಜಿ ಅಧ್ಯಕ್ಷ ಆಸಿಫ್ ಅಲಿ ಝರ್ದಾರಿ
ಲಾಹೋರ್, ಫೆ. 6: ಭಾರತದ ಪ್ರಧಾನಿ ರಾಜೀವ್ ಗಾಂಧಿ ಮತ್ತು ಪಾಕಿಸ್ತಾನದ ಪ್ರಧಾನಿ ಬೆನಝೀರ್ ಭುಟ್ಟೊ ಕಾಶ್ಮೀರ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಸಿದ್ಧರಾಗಿದ್ದರು, ಆದರೆ ಅದೇ ವೇಳೆ ರಾಜೀವ್ ಗಾಂಧಿಯ ಹತ್ಯೆಯಾಯಿತು ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಅಸಿಫ್ ಅಲಿ ಝರ್ದಾರಿ ಹೇಳಿದ್ದಾರೆ.
‘‘ಬಿಬಿ (ಬೇನಝೀರ್ ಭುಟ್ಟೊ) ಸಾಹಿಬಾ 1990ರಲ್ಲಿ ರಾಜೀವ್ ಗಾಂಧಿ ಜೊತೆ ಮಾತನಾಡಿದ್ದರು. ರಾಜೀವ್ ಕೂಡ ಕಾಶ್ಮೀರ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಒಪ್ಪಿದ್ದರು. ಕಳೆದ 10 ವರ್ಷಗಳ ಅವಧಿಯಲ್ಲಿ ಜನರಲ್ ಝಿಯಾ ಸೇರಿದಂತೆ ಪಾಕಿಸ್ತಾನದ ಯಾರೂ ಈ ವಿಷಯದಲ್ಲಿ ನಮ್ಮೊಂದಿಗೆ ಮಾತನಾಡಿಲ್ಲ ಎಂದು ರಾಜೀವ್ ಬೆನಝೀರ್ಗೆ ಹೇಳಿದ್ದರು’’ ಎಂದು ಲಾಹೋರ್ನಲ್ಲಿ ಸೋಮವಾರ ಸಂಜೆ ನಡೆದ ಸಭೆಯೊಂದರಲ್ಲಿ ಝರ್ದಾರಿ ಹೇಳಿದರು.
‘‘ಕಾಶ್ಮೀರ ಪ್ರಮುಖ ವಿವಾದ ಹಾಗೂ ಅದನ್ನು ಪರಿಹರಿಸಬೇಕು ಎನ್ನುವುದನ್ನು ಅವರು (ರಾಜೀವ್) ಒಪ್ಪಿಕೊಂಡಿದ್ದರು. ಅಧಿಕಾರಕ್ಕೆ ಬಂದ ಬಳಿಕ ತಾನು ಈ ವಿಷಯವನ್ನು ಪಾಕಿಸ್ತಾನದ ಜೊತೆ ಪ್ರಸ್ತಾಪಿಸುವುದಾಗಿ ರಾಜೀವ್ ಹೇಳಿದರು. ಆದರೆ, 1991ರಲ್ಲಿ ಅವರ ಹತ್ಯೆಯಾಯಿತು’’ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಹೇಳಿದರು.