ಶಾಂತಿಪಾಲಕರ ಮೇಲೆ ಹೆಚ್ಚುತ್ತಿರುವ ಐಇಡಿ ದಾಳಿ: ಭಾರತ ಕಳವಳ
ವಿಶ್ವಸಂಸ್ಥೆ, ಮಾ. 29: ವಿಶ್ವಸಂಸ್ಥೆಯ ಶಾಂತಿ ಪಾಲಕರ ಮೇಲೆ ನಡೆಯುತ್ತಿರುವ ಸುಧಾರಿತ ಸ್ಫೋಟಕ ಸಾಧನ (ಐಇಡಿ)ಗಳ ದಾಳಿಯಲ್ಲಿ ಹೆಚ್ಚಳವಾಗುತ್ತಿರುವ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ ಹಾಗೂ ಇಂಥ ದಾಳಿಗಳಿಂದ ಶಾಂತಿ ಪಾಲಕರನ್ನು ರಕ್ಷಿಸಲು ಬೇಕಾದ ಸಲಕರಣೆಗಳನ್ನು ಪೂರೈಸುವಂತೆ ಕರೆ ನೀಡಿದೆ.
ಐಇಡಿ ದಾಳಿಗಳು ‘ಅತ್ಯಂತ ಗಂಭೀರ ಕೃತ್ಯಗಳಾಗಿವೆ’’ ಎಂದು ಬುಧವಾರ ಶಾಂತಿಪಾಲನೆ ಬಗ್ಗೆ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಚಿವ ಮಟ್ಟದ ಸಭೆಯಲ್ಲಿ ಭಾರತದ ಉಪ ಖಾಯಂ ಪ್ರತಿನಿಧಿ ತನ್ಮಯ ಲಾಲ್ ಹೇಳಿದರು.
‘‘ಕಳೆದ 4 ವರ್ಷಗಳ ಅವಧಿಯಲ್ಲಿ ವಿಶ್ವಸಂಸ್ಥೆಯ 176 ಶಾಂತಿ ಪಾಲಕರು ಮೃತಪಟ್ಟಿದ್ದು, ಈ ಪೈಕಿ 43 ಸಾವುಗಳು ಐಇಡಿ ಸ್ಫೋಟಗಳಿಂದಾಗಿ ಸಂಭವಿಸಿವೆ. ಐಇಡಿ ಬೆದರಿಕೆ ಹೊಂದಿರುವ ಶಾಂತಿಪಾಲನಾ ಕಾರ್ಯಾಚರಣೆಗಳಿಗೆ ಐಇಡಿ ನಿರೋಧಕ ಸಲಕರಣೆಗಳನ್ನು ಒದಗಿಸಬೇಕು ಎಂದು ನಾವು ಭಾವಿಸುತ್ತೇವೆ’’ ಎಂದು ಲಾಲ್ ನುಡಿದರು.
2016 ನವೆಂಬರ್ನಲ್ಲಿ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊದಲ್ಲಿ ನಡೆದ ಐಇಡಿ ದಾಳಿಯಲ್ಲಿ 16 ಪಂಜಾಬ್ ರೆಜಿಮೆಂಟ್ನ 32 ಭಾರತೀಯ ಶಾಂತಿ ಪಾಲಕರು ಗಾಯಗೊಂಡಿರುವುದನ್ನು ಸ್ಮರಿಸಬಹುದಾಗಿದೆ.
ಮಾಲಿಯಲ್ಲಿ ನಡೆದ ಶಾಂತಿಪಾಲನಾ ಕಾರ್ಯಾಚರಣೆಯ ವೇಳೆ ಸಂಭವಿಸಿದ ಐಇಡಿ ಸ್ಫೋಟಗಳಲ್ಲಿ 7 ಬಾಂಗ್ಲಾದೇಶಿ ಶಾಂತಿ ಪಾಲನಾ ಸೈನಿಕರು ಮೃತಪಟ್ಟಿದ್ದಾರೆ.