ನೇಪಾಳಿ ನೆಲವನ್ನು ಭಾರತದ ವಿರುದ್ಧ ಬಳಸಲು ಬಿಡುವುದಿಲ್ಲ: ನೇಪಾಳ ಪ್ರಧಾನಿ ಒಲಿ ಭರವಸೆ
ಕಠ್ಮಂಡು, ಮೇ 12: ಭಾರತದ ಹಿತಾಸಕ್ತಿಗಳಿಗೆ ನೇಪಾಳ ಮಹತ್ವ ನೀಡುತ್ತದೆ ಹಾಗೂ ತನ್ನ ನೆಲವನ್ನು ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಅದೆಂದೂ ಅವಕಾಶ ನೀಡುವುದಿಲ್ಲ ಎಂದು ನೇಪಾಳ ಪ್ರಧಾನಿ ಕೆ.ಪಿ. ಶರ್ಮ ಒಲಿ ಪ್ರಧಾನಿ ನರೇಂದ್ರ ಮೋದಿಗೆ ಭರವಸೆ ನೀಡಿದ್ದಾರೆ.
ನೇಪಾಳಕ್ಕೆ ಪ್ರಧಾನಿ ಮೋದಿಯ ಎರಡು ದಿನಗಳ ಭೇಟಿಯ ಕೊನೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಿದೇಶ ಕಾರ್ಯದರ್ಶಿ ವಿಜಯ ಗೋಖಲೆ, ಇದು ನೇಪಾಳ ಪ್ರಧಾನಿ ನೀಡಿರುವ ಮಹತ್ವದ ಹೇಳಿಕೆಯಾಗಿದೆ ಹಾಗೂ ಮಾತುಕತೆಗಳಿಂದ ಭಾರತಕ್ಕೆ ತೃಪ್ತಿಯಾಗಿದೆ ಎಂದು ಹೇಳಿದರು.
‘‘ಭಾರತದ ಹಿತಾಸಕ್ತಿಗಳಿಗೆ ನೇಪಾಳ ಮಹತ್ವ ನೀಡುತ್ತದೆ ಹಾಗೂ ತನ್ನ ನೆಲವನ್ನು ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಅದೆಂದೂ ಅವಕಾಶ ನೀಡುವುದಿಲ್ಲ ಎನ್ನುವುದನ್ನು ಒಲಿ ಪುನರುಚ್ಚರಿಸಿದರು’’ ಎಂದು ಗೋಖಲೆ ಹೇಳಿದರು.
ನೇಪಾಳವು ಭಾರತದ 5 ರಾಜ್ಯಗಳೊಂದಿಗೆ ಪೂರ್ವ, ದಕ್ಷಿಣ ಮತ್ತು ಪಶ್ಚಿಮದಲ್ಲಿ 1,850 ಕಿ.ಮೀ. ಗಡಿ ಹೊಂದಿದೆ. ಎರಡೂ ದೇಶಗಳ ಜನರು ತುಂಬಾ ಹಿಂದಿನಿಂದಲೂ ಗಡಿಯ ಆಚೀಚೆಗೆ ಮುಕ್ತವಾಗಿ ಸಂಚರಿಸುತ್ತಿದ್ದಾರೆ. ಗಡಿಯ ಆಚೀಚೆಗೆ ಜನರ ಸಂಬಂಧಿಕರನ್ನು ಹೊಂದಿದ್ದಾರೆ. ಗಡಿ ದಾಟಲು ಉಭಯ ದೇಶಗಳ ಜನರಿಗೆ ವೀಸಾ ಬೇಕಾಗಿಲ್ಲ.
ಶುಕ್ರವಾರ ಒಲಿ ಜೊತೆ ಮಾತುಕತೆ ಮಾತುಕತೆ ನಡೆಸಿದ ಬಳಿಕ, ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಮತ್ತು ನೇಪಾಳ ನಡುವಿನ ತೆರೆದ ಗಡಿಯು ಉಭಯ ದೇಶಗಳ ನಡುವಿನ ನಿಕಟ ಬಾಂಧ್ಯವಕ್ಕೆ ಸಾಕ್ಷಿಯಾಗಿದೆ ಎಂದರು.
‘‘ಸಮಾಜವಿರೋಧಿ ಶಕ್ತಿಗಳು ಅದನ್ನು ದುರುಪಯೋಗ ಪಡಿಸಿಕೊಳ್ಳಲು ನಾವು ಬಿಡುವುದಿಲ್ಲ’’ ಎಂದು ಮೋದಿ ಹೇಳಿದರು.
‘‘ಮುಕ್ತ ಗಡಿಯು ಎರಡೂ ಕಡೆಗಳಲ್ಲಿರುವ ಜನರಿಗೆ ಮಹತ್ವದ್ದಾಗಿವೆ. ಆದರೆ ಸಮಾಜವಿರೋಧಿ ಶಕ್ತಿಗಳು ನಮ್ಮ ಮುಕ್ತ ಗಡಿಗಳನ್ನು ದುರುಪಯೋಗಪಡಿಸಿಕೊಂಡು ಗಡಿಯಾಚೆಯ ಅಪರಾಧಗಳಲ್ಲಿ ತೊಡಗಿವೆ. ಹಾಗಾಗಿ ಗಡಿ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಜಂಟಿ ಪ್ರಯತ್ನಗಳನ್ನು ವೃದ್ಧಿಸಲು ನಾವು ಒಪ್ಪಿಕೊಂಡಿದ್ದೇವೆ’’ ಎಂದರು.