ಪಾಕ್ ವಿರುದ್ಧದ ಜಲವಿವಾದ: ಭಾರತದ ಬೆಂಬಲಕ್ಕೆ ವಿಶ್ವಬ್ಯಾಂಕ್
ಇಸ್ಲಾಮಾಬಾದ್, ಜೂ.6: ಅಂತಾರಾಷ್ಟ್ರೀಯ ವ್ಯಾಜ್ಯ ನಿರ್ಣಯ ನ್ಯಾಯಾಲಯದಲ್ಲಿ ಕಿಶನ್ಗಂಗಾ ಅಣೆಕಟ್ಟು ವಿವಾದವನ್ನು ಕೈಬಿಡುವಂತೆ ಮತ್ತು ತಟಸ್ಥ ತಜ್ಞರನ್ನು ಅಧ್ಯಯನಕ್ಕೆ ನೇಮಕ ಮಾಡುವಂತೆ ಭಾರತ ಮಾಡಿರುವ ಆಗ್ರಹವನ್ನು ಬೆಂಬಲಿಸುವಂತೆ ವಿಶ್ವಬ್ಯಾಂಕ್ ಸಲಹೆ ಮಾಡಿದೆ.
ವಿಶ್ವಬ್ಯಾಂಕ್ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ಕಳೆದ ವಾರ ಪಾಕಿಸ್ತಾನ ಸರ್ಕಾರಕ್ಕೆ ಈ ಸಲಹೆ ಮಾಡಿ, ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಈ ಪ್ರಕರಣ ಮುಂದುವರಿಸದಂತೆ ಸೂಚಿಸಿದ್ದಾರೆ ಎಂದು ಪಾಕಿಸ್ತಾನಿ ದೈನಿಕ ಡಾನ್ ವರದಿಮಾಡಿದೆ.
ಇದಕ್ಕೂ ಮುನ್ನ 2016ರ ನವೆಂಬರ್ 10ರಂದು ಅಮೆರಿಕದ ಮುಖ್ಯ ನ್ಯಾಯಮೂರ್ತಿಗಳನ್ನು, ಲಂಡನ್ ಇಂಪೀರಿಯಲ್ ಕಾಲೇಜಿನ ರೆಕ್ಟರ್ ಹಾಗೂ ವಿಶ್ವಬ್ಯಾಂಕ್ ಅಧ್ಯಕ್ಷರಿಗೆ ವಿಶ್ವಬ್ಯಾಂಕ್ ಸೂಚನೆ ನೀಡಿ, ವ್ಯಾಜ್ಯ ಬಗೆಹರಿಸುವ ಸಲುವಾಗಿ ನ್ಯಾಯಾಲಯದ ಅಧ್ಯಕ್ಷರನ್ನು ನೇಮಿಸುವಂತೆ ಆದೇಶಿಸಿತ್ತು.
ಕಿಶನ್ಗಂಗಾ ಅಣೆಕಟ್ಟು ನಿರ್ಮಾಣಕ್ಕೆ ಪಾಕಿಸ್ತಾನ ವಿರೋಧ ವ್ಯಕ್ತಪಡಿಸಿದ್ದು, ಇದು ಇಂಡಸ್ ಮತ್ತು ಅದರ ಉಪನದಿಗಳ ನೀರು ಹಂಚಿಕೆ ಒಪ್ಪಂದಕ್ಕೆ ವಿರುದ್ಧವಾಗಿದೆ ಎಂಬ ವಾದ ಮಂಡಿಸಿದೆ. 1960ರ ಜಲ ಒಪ್ಪಂದದ ಅನ್ವಯ, ನೀರಿನ ಹರಿವನ್ನು ಬಳಸಿಕೊಂಡು ಜಲವಿದ್ಯುತ್ ಯೋಜನೆ ಆರಂಭಿಸಲು ಒಪ್ಪಂದದಲ್ಲಿ ಅವಕಾಶವಿದೆ ಎನ್ನುವುದು ಭಾರತದ ವಾದ. ಇದರಿಂದ ನೀರಿನ ಹರಿವಿಗೆ ಯಾವುದೇ ತಡೆಯಾಗುವುದಿಲ್ಲ ಹಾಗೂ ನದಿಯ ಕೆಳಮುಖ ಪ್ರವಾಹಕ್ಕೆ ತೊಂದರೆಯಾಗುವುದಿಲ್ಲ ಎನ್ನುವುದು ಭಾರತದ ವಾದ.