ಭ್ರಷ್ಟಾಚಾರ ಪ್ರಕರಣಗಳಿಂದ ಹಿಂದೆ ಸರಿದ ಶರೀಫ್ ವಕೀಲ
ಇಸ್ಲಾಮಾಬಾದ್, ಜೂ. 12: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್ ವಿರುದ್ಧ ನ್ಯಾಶನಲ್ ಅಕೌಂಟಬಿಲಿಟಿ ಬ್ಯೂರೋ (ಎನ್ಎಬಿ) ದಾಖಲಿಸಿರುವ ಭ್ರಷ್ಟಾಚಾರ ಪ್ರಕರಣಗಳಲ್ಲಿ ಶರೀಫ್ರನ್ನು ಪ್ರತಿನಿಧಿಸುವುದರಿಂದ ವಕೀಲ ಖವಾಜ ಹಾರಿಸ್ ಹಿಂದೆ ಸರಿದಿದ್ದಾರೆ.
ಸುಪ್ರಿಂ ಕೋರ್ಟ್ ತನ್ನ ಮೇಲೆ ಹೇರಿರುವ ಒತ್ತಡದಲ್ಲಿ ತನಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಇಂಥ ಒತ್ತಡದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ವಕೀಲ ಮತ್ತು ಅವರ ತಂಡ ಪ್ರಕರಣದಿಂದ ಹಿಂದೆ ಸರಿದಿದೆ.
ಈ ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆಯನ್ನು ಒಂದು ತಿಂಗಳಲ್ಲಿ ಮುಗಿಸುವಂತೆ ಹಾಗೂ ಶನಿವಾರ ವಿಚಾರಣೆಗಳನ್ನು ನಡೆಸುವಂತೆ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ ಎಂದು ಹಾರಿಸ್ ತಿಳಿಸಿದರು.
‘‘ಈ ಒತ್ತಡದಲ್ಲಿ ನ್ಯಾಯಾಲಯವು ಪ್ರಕರಣಕ್ಕೆ ನ್ಯಾಯ ಸಲ್ಲಿಸದು’’ ಎಂದು ಅವರು ಅಭಿಪ್ರಾಯಪಟ್ಟರು.
ಅವಸರ ಯಾಕೆ: ಶರೀಫ್
ತನ್ನ ವಿರುದ್ಧ ದಾಖಲಾಗಿರುವ ಮೂರು ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆಯನ್ನು ಅವಸರವಸರವಾಗಿ ಮುಗಿಸಲು ಸುಪ್ರೀಂ ಕೋರ್ಟ್ ತೀರ್ಮಾನಿಸಿದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್ ಆರೋಪಿಸಿದ್ದಾರೆ.
‘‘ಅವಸರ ಪಡಿಸಿದರೆ ನ್ಯಾಯ ಸಿಗದು ಎನ್ನುವುದು ಮುಖ್ಯ ನ್ಯಾಯಾಧೀಶ ಸಾಕಿಬ್ ನಿಸಾರ್ಗೆ ಗೊತ್ತಿಲ್ಲವೇ?’’ ಎಂದು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಶ್ನಿಸಿದರು.