ಭಾರತದ ಜೊತೆ ಉತ್ತಮ ಸಂಬಂಧಕ್ಕೆ ಯತ್ನ : ಇಮ್ರಾನ್ ಖಾನ್
"22 ವರ್ಷಗಳ ಹೋರಾಟದ ಬಳಿಕ ಪಾಕಿಸ್ತಾನದ ಸೇವೆ ಮಾಡಲು ಅವಕಾಶ ಸಿಕ್ಕಿದೆ"
ಕರಾಚಿ, ಜು.27: ಪಾಕಿಸ್ತಾನದಲ್ಲಿ ನಡೆದ ಚುನಾವಣೆಯಲ್ಲಿ ಭರ್ಜರಿ ಗೆಲುವಿನೊಂದಿಗೆ ಪ್ರಧಾನ ಮಂತ್ರಿ ಹುದ್ದೆಗೇರುವ ಹಾದಿಯಲ್ಲಿರುವ ಪಾಕಿಸ್ತಾನದ ತೆಹ್ರೀಕ್ ಇ ಇನ್ಸಾಫ್ ಪಕ್ಷದ(ಪಿಟಿಐ) ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರು ಭಾರತದ ಜೊತೆ ಉತ್ತಮ ಸಂಬಂಧ ಬೆಳೆಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು ಕಾಶ್ಮೀರದ ಸಮಸ್ಯೆಯನ್ನು ಉಭಯ ದೇಶಗಳ ನಾಯಕರು ಒಟ್ಟಿಗೆ ಕುಳಿತು ಮಾತುಕತೆ ಮೂಲಕ ಬಗೆಹರಿಸಬೇಕಾಗಿದೆ ಎಂದು ಹೇಳಿದ್ದಾರೆ.
22 ವರ್ಷಗಳ ಹೋರಾಟದ ನಂತರ ನನಗೆ ಪಾಕಿಸ್ತಾನದ ಸೇವೆ ಮಾಡಲು ಅವಕಾಶ ದೊರೆತಿದೆ ಎಂದು ಇಮ್ರಾನ್ ಖಾನ್ ಹೇಳಿದರು.
ಇದೊಂದು ಐತಿಹಾಸಿಕ ಚುನಾವಣೆಯಾಗಿದೆ. ಇದರಿಂದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿದೆ. ಇಡೀ ದೇಶದ ನಾಗರಿಕರು ತಮ್ಮ ಪಕ್ಷದ ಪರವಾಗಿ ಬೆಂಬಲ ನೀಡಿರುವುದಕ್ಕೆ ನಾನು ಅವರಿಗೆ ಆಭಾರಿಯಾಗಿದ್ದೇನೆ ಖಾನ್ ಹೇಳಿದ್ದಾರೆ.
"ಭಾರತದ ಮಾಧ್ಯಮಗಳು ನನ್ನನ್ನು ವಿಲನ್ ನಂತೆ ತೋರಿಸಿದೆ. ಆದರೆ ನಾನು ಭಾರತದ ಬಗ್ಗೆ ಗೌರವ ಹೊಂದಿದ್ದೇನೆ "ಎಂದು ಖಾನ್ ನುಡಿದರು.
ಕಾಶ್ಮೀರದ ಜನತೆ ಸಂಕಷ್ಟದಲ್ಲಿದ್ದಾರೆ. ಕಣಿವೆ ರಾಜ್ಯದ ಸಮಸ್ಯೆಯನ್ನು ಬಗೆ ಹರಿಸಬೇಕು. ಈ ವಿಚಾರದಲ್ಲಿ ಭಾರತ ಒಂದು ಹೆಜ್ಜೆ ಇಟ್ಟರೆ, ಪಾಕಿಸ್ತಾನ ಎರಡು ಹೆಜ್ಜೆ ಮುಂದಿಡಲಿದೆ ಎಂದರು.