ಹೆಲಿಕಾಪ್ಟರ್ ಬ್ಲೇಡ್ಗೆ ಸಿಲುಕಿ ಮಾನಸ ಸರೋವರ ಯಾತ್ರಿ ಮೃತ್ಯು
ಕಠ್ಮಂಡು, ಆ.15: ನೇಪಾಳದ ಹಿಲ್ಸಾ ಪ್ರದೇಶದ ಗುಡ್ಡಗಾಡು ಹೆಲಿಪ್ಯಾಡ್ ಒಂದರಲ್ಲಿ ಹೆಲಿಕಾಪ್ಟರ್ನ ಹಿಂಬದಿ ಬ್ಲೇಡ್ಗೆ ಸಿಲುಕಿ ಮುಂಬೈನ ಕೈಲಾಸ ಮಾನಸ ಸರೋವರ ಯಾತ್ರಿಯೊಬ್ಬರು ಬಲಿಯಾಗಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ.
ಮೃತ ವ್ಯಕ್ತಿಯನ್ನು ಕೈಲಾಸ ಮಾನಸ ಸರೋವರ ಯಾತ್ರೆಗೆ ಹೊರಟಿದ್ದ ಮುಂಬೈ ಮೂಲದ ನಾಗೇಂದ್ರ ಕುಮಾರ್ ಕಾರ್ತಿಕ್ ಮೆಹ್ತಾ ಎಂದು ಗುರುತಿಸಲಾಗಿದೆ.
ಹೆಲಿಪ್ಯಾಡ್ನಲ್ಲಿ ಹೆಲಿಕಾಪ್ಟರ್ ನಿಂತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಜಿಲ್ಲೆಯ ಸಹಾಯಕ ಮುಖ್ಯಸ್ಥ ಮಹೇಶ್ ಕುಮಾರ್ ಪೊಖ್ರೇಲ್ ವಿವರಿಸಿದ್ದಾರೆ.
ಹೆಲಿಕಾಪ್ಟರ್ನಿಂದ ಕೆಳಗಿಳಿದ ಯಾತ್ರಿ, ದೂರ ಹೋಗುವ ಬದಲು ಹೆಲಿಕಾಪ್ಟರ್ನ ಹಿಂದಿನ ಬ್ಲೇಡ್ ಬಳಿಗೆ ತೆರಳಿದಾಗ ಹಿಂಬದಿಯ ರೋಟರ್ಗೆ ಸಿಲುಕಿ ಈ ದುರಂತ ಸಂಭವಿಸಿದೆ. ಮೃತದೇಹವನ್ನು ಸಿಮಿಕೋಟ್ಗೆ ಒಯ್ದು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.
ಹೆಲಿಕಾಪ್ಟರ್ನ ಹಿಂದಿನ ಭಾಗಕ್ಕೆ ಹಾನಿಯಾಗಿದೆ. ನೇಪಾಳದ ಸಿಮಿಕೋಟ್ ಹಾಗೂ ಹಿಲ್ಸಾ ಪ್ರದೇಶಕ್ಕೆ ಪುಟ್ಟ ವಿಮಾನಗಳು ಅಥವಾ ಹೆಲಿಕಾಪ್ಟರ್ ಮೂಲಕ ಮಾತ್ರ ಸಂಪರ್ಕ ಸಾಧಿಸಲು ಅವಕಾಶವಿದೆ. ಈ ಸ್ಥಳಕ್ಕೆ ಭೇಟಿ ನೀಡಲು ಉಳಿದಂತೆ ಯಾವ ಸಂಪರ್ಕ ವ್ಯವಸ್ಥೆಯೂ ಇಲ್ಲ.