ಸೌದಿ ಅರೇಬಿಯಾದಲ್ಲಿ ಸಿಲುಕಿಕೊಂಡಿರುವ ಭಾರತೀಯರಿಗೆ ವಾಪಸಾಗಲು ಕೇಂದ್ರ ಸರಕಾರ ನೆರವು
3,000 ಮಂದಿಗೆ ರಿಟರ್ನ್ ಟಿಕೆಟ್
ಹೊಸದಿಲ್ಲಿ, ಡಿ.21: ಸೌದಿ ಅರೇಬಿಯಾದಲ್ಲಿ ಸಿಲುಕಿಕೊಂಡಿರುವ 3,000 ಮಂದಿ ಭಾರತೀಯರಿಗೆ ಸ್ವದೇಶಕ್ಕೆ ವಾಪಸಾಗಲು ಕೇಂದ್ರ ಸರಕಾರವು ವಿಮಾನ ಟಿಕೆಟ್ ವ್ಯವಸ್ಥೆಯನ್ನು ಮಾಡಿಕೊಡಲಿದೆ ಎಂದು ಕೇಂದ್ರ ಆಹಾರ ಸಂಸ್ಕರಣೆ ಖಾತೆ ಸಚಿವೆ ಹರ್ಸಿಮೃತ್ ಕೌರ್ ಬಾದಲ್ ತಿಳಿಸಿದ್ದಾರೆ.
ಸೌದಿ ಅರೇಬಿಯಾದಿಂದ ಸ್ವದೇಶಕ್ಕೆ ಆಗಮಿಸಿ ಮತ್ತೆ ಅಲ್ಲಿ ಹೋಗಿ ದುಡಿಯಲು ಪರವಾನಿಗೆಯನ್ನು ನವೀಕರಿಸಲು ಪ್ರಯತ್ನಿಸುವವರಿಗೆ ಕೇಂದ್ರ ಸರಕಾರ ಇದೀಗ ನೆರವು ನೀಡಲು ಮುಂದಾಗಿದೆ.
ರಿಯಾದ್ ನಲ್ಲಿ 1,000 ಮಂದಿ ಪಂಜಾಬ್ ಮೂಲದ ಭಾರತದ ಕೆಲಸಗಾರರಿದ್ದಾರೆ ಆದರೆ ಅಲ್ಲಿ ಅವರು ಸಂಬಳ ನೀಡಲಾಗುತ್ತಿಲ್ಲ. ಅವರ ವೀಸಾ ಮತ್ತು ವಸತಿ ಪರವಾನಿಗೆ ಕಾಲಾವಧಿ ಮುಗಿದಿದೆ. ಸೌದಿ ಅರೇಬಿಯಾದ ಪ್ರಮುಖ ಕಟ್ಟಡ ನಿರ್ಮಾಣ ಕಂಪೆನಿಯು ಹಣಕಾಸಿನ ಮುಗ್ಗಟ್ಟಿನಿಂದಾಗಿ ಬಾಗಿಲು ಮುಚ್ಚಿದೆ. ಇಲ್ಲಿ ದುಡಿಯುತ್ತಿದ್ದ ಭಾರತೀಯರು ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ.
ಸೌದಿ ಅರೇಬಿಯಾದಲ್ಲಿ ಕೆಲಸವಿಲ್ಲದೆ ಸಿಲುಕಿಕೊಂಡಿರುವ ಭಾರತೀಯರ ಬಗ್ಗೆ ಸಚಿವೆ ಕೌರ್ ಬಾದಲ್ ಅವರು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಗಮನ ಸೆಳೆದಿದ್ದಾರೆ.
ಈ ಸಂಬಂಧ ಸೌದಿ ಅರೇಬಿಯಾದ ಸಂಬಂಧಪಟ್ಟ ಸಚಿವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಸಚಿವೆ ಸುಷ್ಮಾ ಸ್ವರಾಜ್ ಮಾಹಿತಿ ನೀಡಿರುವುದಾಗಿ ಸಚಿವೆ ಕೌರ್ ತಿಳಿಸಿದ್ದಾರೆ.