ಕರ್ತಾರ್ಪುರ ಕಾರಿಡಾರ್: ಭಾರತದಿಂದ ‘ಬಾಲಿಶ’ ಪ್ರತಿಕ್ರಿಯೆ; ಪಾಕ್ ಆರೋಪ
ಇಸ್ಲಾಮಾಬಾದ್, ಜ. 24: ಭಾರತೀಯ ಸಿಖ್ಖರಿಗೆ ಕರ್ತಾರ್ಪುರ ಕಾರಿಡಾರನ್ನು ತೆರೆಯುವುದಕ್ಕೆ ಸಂಬಂಧಿಸಿದ ಒಪ್ಪಂದವೊಂದನ್ನು ಅಂತಿಮಗೊಳಿಸುವುದಕ್ಕೆ ಸಂಬಂಧಿಸಿ ಭಾರತ ನೀಡಿರುವ ಪ್ರತಿಕ್ರಿಯೆ ‘ಬಾಲಿಶ’ವಾಗಿದೆ ಎಂದು ಪಾಕಿಸ್ತಾನ ಗುರುವಾರ ಹೇಳಿದೆ. ಆದರೆ, ಇದಕ್ಕೆ ಪಾಕಿಸ್ತಾನದ ಪ್ರತಿಕ್ರಿಯೆ ಪ್ರಬುದ್ಧವಾಗಿರುತ್ತದೆ ಎಂದಿದೆ.
ಕಾರಿಡಾರ್ಗೆ ಸಂಬಂಧಿಸಿದ ವಿವರವಾದ ಪ್ರಸ್ತಾಪ ಹಾಗೂ ಕರಡು ಒಪ್ಪಂದದ ಪ್ರತಿಯೊಂದನ್ನು ಪಾಕಿಸ್ತಾನವು ಭಾರತಕ್ಕೆ ಸಲ್ಲಿಸಿತ್ತು ಎಂದು ಪಾಕಿಸ್ತಾನದ ವಿದೇಶ ಕಚೇರಿಯ ವಕ್ತಾರ ಮುಹಮ್ಮದ್ ಫೈಝಲ್ ಹೇಳಿದರು. ಒಪ್ಪಂದವನ್ನು ಅಂತಿಮಗೊಳಿಸುವುದಕ್ಕಾಗಿ ಭಾರತೀಯ ನಿಯೋಗವೊಂದನ್ನು ಪಾಕಿಸ್ತಾನಕ್ಕೆ ಆಹ್ವಾನಿಸಿತ್ತು.
ಪಾಕಿಸ್ತಾನದ ಉಪಕ್ರಮಕ್ಕೆ ಪ್ರತಿಕ್ರಿಯಿಸುವ ಬದಲು, ಭಾರತವು ಪಾಕಿಸ್ತಾನದ ನಿಯೋಗವೊಂದನ್ನು ಮಾತುಕತೆಗಾಗಿ ಹೊಸದಿಲ್ಲಿಗೆ ಆಹ್ವಾನಿಸಿದೆ ಹಾಗೂ ಅದಕ್ಕೆ ಎರಡು ದಿನಾಂಕಗಳನ್ನು ನಿಗದಿಪಡಿಸಿದೆ ಎಂದು ಫೈಝಲ್ ಹೇಳಿದರು.
‘‘ಇಂಥ ಮಹತ್ವದ ವಿಷಯದಲ್ಲಿ ಪಾಕಿಸ್ತಾನವು ಪ್ರಬುದ್ಧವಾಗಿ ವರ್ತಿಸಲಿದೆ ಹಾಗೂ ಅದರ ಪ್ರತಿಕ್ರಿಯೆಯನ್ನು ಶೀಘ್ರವೇ ಭಾರತಕ್ಕೆ ಕಳುಹಿಸುವುದು’’ ಎಂದರು.