ಸಂಜೆ ವೇಳೆ ವಾಘಾ ಗಡಿ ಮೂಲಕ ಅಭಿನಂದನ್ ಭಾರತಕ್ಕೆ: ಪಾಕ್ ವಿದೇಶಾಂಗ ಸಚಿವ
ಹೊಸದಿಲ್ಲಿ, ಮಾ.1: ಭಾರತೀಯ ವಾಯುಪಡೆಯ ಪೈಲಟ್ ಅಭಿನಂದನ್ ರನ್ನು ಇಂದು ಸಂಜೆ ವೇಳೆ ವಾಘಾ ಗಡಿ ಮೂಲಕ ಬಿಡುಗಡೆಗೊಳಿಸಲಾಗುವುದು ಎಂದು ಪಾಕ್ ವಿದೇಶಾಂಗ ಸಚಿವ ಶಾ ಮುಹಮ್ಮದ್ ಖುರೇಷಿ ಹೇಳಿದ್ದಾರೆ.
ಈಗಾಗಲೇ ಅಭಿನಂದನ್ ರನ್ನು ಇಸ್ಲಾಮಾಬಾದ್ ನಲ್ಲಿರುವ ಹೈಕಮಿಷನ್ ಗೆ ಹಸ್ತಾಂತರಿಸಲಾಗಿದೆ. 3-4 ಗಂಟೆ ಸುಮಾರಿಗೆ ಅವರು ವಾಘಾ ಮೂಲಕ ಭಾರತ ಪ್ರವೇಶಿಸಲಿದ್ದಾರೆ.
ವಾಘಾ ಗಡಿಯಲ್ಲಿ ಸಂಭ್ರಮಾಚರಣೆ
ಪಾಕಿಸ್ತಾನದ ವಶದಲ್ಲಿರುವ ವಾಯು ಸೇನೆ ವಿಂಗ್ ಕಮಾಂಡರ್ ಅಭಿನಂದನ್ರನ್ನು ಸ್ವಾಗತಿಸಲು ವಾಘಾ ಗಡಿಯಲ್ಲಿ ಸಕಲ ಸಿದ್ಧತೆ ನಡೆದಿದ್ದು, ಈ ಪ್ರದೇಶದಲ್ಲಿ ಸಂಭ್ರಮಾಚರಣೆ ಮೇಳೈಸಿದೆ. ಐಎಎಫ್ ನಿಯೋಗ ವಿಂಗ್ ಕಮಾಂಡರ್ ಅಭಿನಂದನ್ರನ್ನು ಸ್ವಾಗತಿಸಲು ವಾಘಾ ಗಡಿಯಲ್ಲಿ ಜಮಾಯಿಸಿದೆ.
"ನಾನು ಪಂಜಾಬ್ನ ಗಡಿ ಪ್ರದೇಶದ ಪ್ರವಾಸ ಮಾಡಿ ಇದೀಗ ಅಮೃತಸರದಲ್ಲಿದ್ದೇನೆ., ಅಭಿನಂದನ್ರನ್ನು ವಾಘಾ ಗಡಿ ಮೂಲಕ ಪಾಕಿಸ್ತಾನ ಸರಕಾರ ಹಸ್ತಾಂತರಿಸಲಿದೆ ಎಂಬ ಮಾಹಿತಿ ನನಗೆ ಲಭಿಸಿದೆ. ವಾಘಾ ಗಡಿಗೆ ತೆರಳಿ ಅಭಿನಂದನ್ರನ್ನು ಆತ್ಮೀಯವಾಗಿ ಸ್ವಾಗತಿಸುವುದು ನನಗೆ ಗೌರವದ ವಿಚಾರವಾಗಿದೆ'' ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಟ್ವೀಟ್ ಮಾಡಿದ್ದಾರೆ.