ಮುಸ್ಲಿಮ್ ವಿರೋಧಿ ಗುಂಪುಗಳೊಂದಿಗೆ ಶ್ರೀಲಂಕಾ ಸೈನಿಕರು ಶಾಮೀಲಾಗಿಲ್ಲ: ಸೇನಾ ಮುಖ್ಯಸ್ಥ
ಕೊಲಂಬೊ, ಮೇ 17: ತನ್ನ ಸೈನಿಕರು ಮುಸ್ಲಿಮ್ ವಿರೋಧಿ ಗುಂಪುಗಳೊಂದಿಗೆ ಶಾಮೀಲಾಗಿದ್ದು, ವ್ಯಾಪಿಸುತ್ತಿರುವ ಹಿಂಸಾಚಾರವನ್ನು ನಿಯಂತ್ರಿಸಲು ವಿಫಲವಾಗಿದೆ ಎಂಬ ಆರೋಪಗಳನ್ನು ಶ್ರೀಲಂಕಾ ಸೇನೆ ಗುರುವಾರ ನಿರಾಕರಿಸಿದೆ.
ಶ್ರೀಲಂಕಾದಲ್ಲಿ ಈಸ್ಟರ್ ರವಿವಾರ ಸಂಭವಿಸಿದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ನಡೆದ ಮುಸ್ಲಿಮ್ ವಿರೋಧಿ ಗಲಭೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿರುವುದನ್ನು ಸ್ಮರಿಸಬಹುದಾಗಿದೆ.
ಇತ್ತೀಚಿನ ಗಲಭೆಯ ವೇಳೆ, ಮನೆಯೊಂದರ ಮೇಲೆ ದಾಳಿ ನಡೆಸಲು ಸೈನಿಕರು ಗುಂಪೊಂದಕ್ಕೆ ಸಂಕೇತಗಳನ್ನು ನೀಡುತ್ತಿದ್ದಾರೆ ಎನ್ನುವುದನ್ನು ತೋರಿಸುತ್ತದೆ ಎನ್ನಲಾದ ಸಿಸಿಟಿವಿ ದೃಶ್ಯಗಳಲ್ಲಿ ಹಾಗೇನೂ ಇಲ್ಲ ಎಂದು ರಾಜಧಾನಿ ಕೊಲಂಬೊದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೇನಾ ಮುಖ್ಯಸ್ಥ ಮಹೇಶ್ ಸೇನಾನಾಯಕೆ ಹೇಳಿದರು.
‘‘ಮೂರು ಕ್ಯಾಮರಾಗಳಿಂದ ಪಡೆದ ದೃಶ್ಯಗಳನ್ನು ನಾವು ನೋಡಿದ್ದೇವೆ. ಸೈನಿಕರು ಗಲಭೆಕೋರರೊಂದಿಗೆ ಶಾಮೀಲಾಗಿರುವುದು ನಮಗೆ ಕಂಡುಬಂದಿಲ್ಲ’’ ಎಂದರು.
‘‘ಇಂಥ ಯಾವುದೇ ವರ್ತನೆ ಕಂಡುಬಂದರೆ ಕ್ರಮ ತೆಗೆದುಕೊಳ್ಳಲು ನಾನು ಹಿಂಜರಿಯುವುದಿಲ್ಲ’’ ಎಂದು ಸೇನಾ ಮುಖ್ಯಸ್ಥರು ನುಡಿದರು.