ಆಸ್ಟ್ರೇಲಿಯ: ಅದಾನಿ ಕಲ್ಲಿದ್ದಲು ಗಣಿಗೆ ಅಂತಿಮ ಅನುಮೋದನೆ
ಕ್ಯಾನ್ಬೆರ (ಆಸ್ಟ್ರೇಲಿಯ), ಜೂ. 13: ಆಸ್ಟ್ರೇಲಿಯದ ಕ್ವೀನ್ಸ್ಲ್ಯಾಂಡ್ನಲ್ಲಿ ತನ್ನ ವಿವಾದಾಸ್ಪದ ಕಲ್ಲಿದ್ದಲು ಗಣಿಯ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲು ತಡೆಯಾಗಿದ್ದ ಕೊನೆಯ ಕಾನೂನು ತೊಡಕನ್ನು ಭಾರತದ ಇಂಧನ ಕ್ಷೇತ್ರದ ದೈತ್ಯ ಅದಾನಿ ಗುಂಪು ಗುರುವಾರ ನಿವಾರಿಸಿಕೊಂಡಿದೆ.
ಕಂಪೆನಿಯ ಅಂತರ್ಜಲ ನಿರ್ವಹಣೆ ಯೋಜನೆಗೆ ಕ್ವೀನ್ಸ್ಲ್ಯಾಂಡ್ ರಾಜ್ಯ ಸರಕಾರ ಅನುಮೋದನೆ ನೀಡಿದೆ.
ಪ್ರಧಾನಿ ಸ್ಕಾಟ್ ಮೊರಿಸನ್ ನೇತೃತ್ವದ, ಆಸ್ಟ್ರೇಲಿಯದ ಕಲ್ಲಿದ್ದಲು ಪರವಾಗಿರುವ ಮಿತ್ರಕೂಟವು ಚುನಾವಣೆಯಲ್ಲಿ ಅಚ್ಚರಿಯೆಂಬಂತೆ ಅಧಿಕಾರಕ್ಕೆ ಮರಳಿದ ವಾರಗಳ ಬಳಿಕ, ಅದಾನಿ ಗುಂಪಿನ ಬೃಹತ್ ಕಲ್ಲಿದ್ದಲು ಗಣಿ ಯೋಜನೆಗೆ ಬೇಕಾಗಿದ್ದ ಅಂತಿಮ ಅಂಗೀಕಾರ ಲಭಿಸಿದೆ.
ಅಪಾಯಕ್ಕೆ ಗುರಿಯಾಗಿರುವ ಕಪ್ಪು ಗಂಟಲಿನ ಫಿಂಚ್ ಹಕ್ಕಿಗಳನ್ನು ರಕ್ಷಿಸುವ ಯೋಜನೆಯನ್ನು ಅದಾನಿ ಗುಂಪು ಸಲ್ಲಿಸಿದ ಬಳಿಕ, ಮೇ 31ರಂದು ಅದಕ್ಕೆ ಕ್ವೀನ್ಸ್ಲ್ಯಾಂಡ್ ರಾಜ್ಯ ಸರಕಾರದಿಂದ ಮೊದಲ ಅಂಗೀಕಾರ ದೊರೆತಿರುವುದನ್ನು ಸ್ಮರಿಸಬಹುದಾಗಿದೆ.
ಇನ್ನು ಕೆಲವೇ ದಿನಗಳಲ್ಲಿ ಗಣಿ ಕಂಪೆನಿಯು ತನ್ನ ನಿರ್ಮಾಣ ಕಾಮಗಾರಿಯನ್ನು ಆರಂಭಿಸುವ ನಿರೀಕ್ಷೆಯಿದೆ.