ಭಯೋತ್ಪಾದಕ ಕೃತ್ಯಗಳಿಗೆ ಬೆಂಬಲಿಗ ದೇಶಗಳನ್ನೇ ಜವಾಬ್ದಾರಿಯಾಗಿಸಬೇಕು
ಶಾಂಘೈ ಸಹಕಾರ ಸಂಘಟನೆ ಶೃಂಗ ಸಮ್ಮೇಳನದಲ್ಲಿ ಪ್ರಧಾನಿ ಮೋದಿ
ಬಿಶ್ಕೆಕ್ (ಕಿರ್ಗಿಸ್ತಾನ್), ಜೂ. 14: ಕಿರ್ಗಿಸ್ತಾನದ ರಾಜಧಾನಿ ಬಿಶ್ಕೆಕ್ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆ (ಎಸ್ಸಿಒ)ಯ ಶೃಂಗ ಸಮ್ಮೇಳನದಲ್ಲಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಕಟು ಎಚ್ಚರಿಕೆ ನೀಡಿದ್ದಾರೆ. ಭಯೋತ್ಪಾದನೆಯನ್ನು ಪ್ರಾಯೋಜಿಸುವ, ಅದಕ್ಕೆ ನೆರವು ಮತ್ತು ಬೆಂಬಲ ನೀಡುವ ದೇಶಗಳನ್ನು ಭಯೋತ್ಪಾದಕ ಕೃತ್ಯಗಳಿಗೆ ಜವಾಬ್ದಾರಿಯಾಗಿಸಬೇಕು ಎಂದು ಅವರು ಹೇಳಿದ್ದಾರೆ.
ಶಾಂಘೈ ಸಹಕಾರ ಸಂಘಟನೆಯ ಉದ್ದೇಶವೇ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಸಹಕಾರವನ್ನು ಬಲಪಡಿಸುವುದಾಗಿದೆ ಎಂದು ಹೇಳಿದ ಪ್ರಧಾನಿ, ಈ ಜಾಗತಿಕ ಪಿಡುಗಿನ ವಿರುದ್ಧ ಹೋರಾಡಲು ಜಾಗತಿಕ ಸಮ್ಮೇಳನವೊಂದನ್ನು ಏರ್ಪಡಿಸಬೇಕೆಂದು ಕರೆ ನೀಡಿದರು.
ದೇಶಗಳು ತಮ್ಮ ಸಂಕುಚಿತ ಮನೋಭಾವವನ್ನು ತೊರೆದು ಭಯೋತ್ಪಾದನೆ ವಿರುದ್ಧ ಹೋರಾಡಲು ಮುಂದಾಗಬೇಕು ಎಂದು ಮೋದಿ ಹೇಳಿದರು. ಈ ಸಂದರ್ಭದಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಉಪಸ್ಥಿತರಿದ್ದರು.
‘‘ಕಳೆದ ರವಿವಾರ ನನ್ನ ಶ್ರೀಲಂಕಾ ಭೇಟಿಯ ವೇಳೆ, ನಾನು ಸೇಂಟ್ ಆ್ಯಂಟನಿ ಚರ್ಚ್ಗೆ ಹೋದೆ. ಅಲ್ಲಿ ನಾನು ಭಯೋತ್ಪಾದನೆಯ ವಿಕೃತ ಮುಖವನ್ನು ನೋಡಿದೆ. ಭಯೋತ್ಪಾದನೆಯು ಎಲ್ಲಾ ಕಡೆಗಳಲ್ಲಿ ಅಮಾಯಕರ ಪ್ರಾಣಗಳನ್ನು ಪಡೆಯುತ್ತದೆ’’ ಎಂದರು.
ಎರಡು ದಿನಗಳ ಶಾಂಘೈ ಸಹಕಾರ ಮಂಡಳಿ ಸಮ್ಮೇಳನದಲ್ಲಿ ಭಾಗವಹಿಸುವುದಕ್ಕಾಗಿ ಪ್ರಧಾನಿ ಮೋದಿ ಗುರುವಾರ ಬಿಶ್ಕೆಕ್ಗೆ ಆಗಮಿಸಿದರು.
ಶಾಂಘೈ ಸಹಕಾರ ಮಂಡಳಿಯು ಚೀನಾ ನೇತೃತ್ವದ 8 ಸದಸ್ಯರ ಆರ್ಥಿಕ ಮತ್ತು ಭದ್ರತಾ ವೇದಿಕೆಯಾಗಿದೆ. ಚೀನಾ, ರಶ್ಯ, ಕಝಖ್ಸ್ತಾನ್, ಕಿರ್ಗಿಸ್ತಾನ್, ತಜಿಕಿಸ್ತಾನ್, ಉಝ್ಬೆಕಿಸ್ತಾನ್, ಭಾರತ ಮತ್ತು ಪಾಕಿಸ್ತಾನಗಳು ಇದರ ಸದಸ್ಯ ದೇಶಗಳಾಗಿವೆ. ಭಾರತ ಮತ್ತು ಪಾಕಿಸ್ತಾನಗಳನ್ನು 2017ರಲ್ಲಿ ಈ ಸಂಘಟನೆಗೆ ಸೇರಿಸಲಾಗಿತ್ತು.
ಪರಸ್ಪರ ಅಭಿನಂದಿಸದ ಮೋದಿ, ಇಮ್ರಾನ್
ಶಾಂಘೈ ಸಹಕಾರ ಮಂಡಳಿಯ ಶೃಂಗಸಭೆಯಲ್ಲಿ ಭಾಗವಹಿಸಿರುವ ನಾಯಕರಿಗೆ ಕಿರ್ಗಿಸ್ತಾನ್ ಅಧ್ಯಕ್ಷ ಸೂರೊನ್ಬೇ ಜೀನ್ಬೆಕೊವ್ ಗುರುವಾರ ರಾತ್ರಿ ಅನೌಪಚಾರಿಕ ಔತಣಕೂಟವೊಂದನ್ನು ಏರ್ಪಡಿಸಿದ ವೇಳೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನಡುವೆ ಯಾವುದೇ ಮಾತುಕತೆ ನಡೆಯಲಿಲ್ಲ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಎರಡು ದಿನಗಳ ಶೃಂಗ ಸಮ್ಮೇಳನದ ನೇಪಥ್ಯದಲ್ಲಿ ನಡೆದ ಔತಣಕೂಟದಲ್ಲಿ ಮೋದಿ ಮತ್ತು ಖಾನ್ ಪರಸ್ಪರರನ್ನು ಅಭಿನಂದಿಸಲೂ ಇಲ್ಲ ಎಂದು ವರದಿ ತಿಳಿಸಿದೆ.
ಅದೇ ವೇಳೆ, ಸಮ್ಮೇಳನದ ನೇಪಥ್ಯದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಜೊತೆ ಮಾತುಕತೆ ನಡೆಸಿದ ಪ್ರಧಾನಿ ಮೋದಿ, ಮಾತುಕತೆ ಆರಂಭಗೊಳ್ಳುವ ಮೊದಲು ಪಾಕಿಸ್ತಾನವು ಭಯೋತ್ಪಾದನೆ ವಿರುದ್ಧ ನೈಜ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಭಾರತದ ನಿಲುವನ್ನು ವ್ಯಕ್ತಪಡಿಸಿದರು.
‘‘ಭಯೋತ್ಪಾದನೆ ಮುಕ್ತ ವಾತಾವರಣವೊಂದನ್ನು ಪಾಕಿಸ್ತಾನ ನಿರ್ಮಿಸಬೇಕಾಗಿದೆ. ಆದರೆ, ಈ ಹಂತದಲ್ಲಿ ಅದು ಸಂಭವಿಸಿರುವುದನ್ನು ನಾವು ನೋಡಿಲ್ಲ. ಪಾಕಿಸ್ತಾನವು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ’’ ಎಂಬುದಾಗಿ ಮೋದಿ ಚೀನಾ ಅಧ್ಯಕ್ಷರಿಗೆ ತಿಳಿಸಿದರು ಎಂದು ಭಾರತದ ವಿದೇಶ ಕಾರ್ಯದರ್ಶಿ ವಿಜಯ ಗೋಖಲೆ ಹೇಳಿದರು.
ಪಾಕಿಸ್ತಾನದೊಂದಿಗೆ ಯಾವುದೇ ದ್ವಿಪಕ್ಷೀಯ ಮಾತುಕತೆಗಳು ನಡೆಯುವ ಸಾಧ್ಯತೆಯನ್ನು ಮೋದಿಯ ಬಿಶ್ಕೆಕ್ ಪ್ರವಾಸಕ್ಕೂ ಮೊದಲು ಭಾರತ ತಳ್ಳಿಹಾಕಿರುವುದನ್ನು ಸ್ಮರಿಸಬಹುದಾಗಿದೆ