ಇಂದು ವಿಂಡೀಸ್ ಸರಣಿಗೆ ಟೀಮ್ ಇಂಡಿಯಾ ಆಯ್ಕೆ
ಮುಂಬೈ, ಜು.20: ವಿಶ್ವಕಪ್ ಬಳಿಕ ಮೊದಲ ಬಾರಿ ಬಿಸಿಸಿಐ ಆಯ್ಕೆ ಸಮಿತಿಯು ರವಿವಾರ ಇಲ್ಲಿ ಸಭೆ ಸೇರಲಿದ್ದು, ಮುಂಬರುವ ವೆಸ್ಟ್ಇಂಡೀಸ್ ಪ್ರವಾಸ ಸರಣಿಗೆ ಭಾರತ ಕ್ರಿಕೆಟ್ ತಂಡದ ಆಯ್ಕೆ ನಡೆಸಲಿದೆ. ಭಾರತ ವಿಶ್ವಕಪ್ನ ಸೆಮಿಫೈನಲ್ನಲ್ಲಿ ನಿರ್ಗಮಿಸಿದ ಬಳಿಕ ಕೈಗೊಳ್ಳಲಿರುವ ಟೀಮ್ ಇಂಡಿಯಾದ ಮೊದಲ ಪ್ರವಾಸ ಸರಣಿಗೆ ತಂಡದ ಆಯ್ಕೆಯು ಎಂಎಸ್ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿಗೆ ಸವಾಲಾಗಲಿದೆ.
ಮಾಜಿ ನಾಯಕ ಹಾಗೂ ವಿಕೆಟ್ಕೀಪರ್ ಮಹೇಂದ್ರ ಸಿಂಗ್ ಧೋನಿ ಅವರನ್ನು ತಂಡಕ್ಕೆ ಆಯ್ಕೆ ಮಾಡಬೇಕೆ? ಬೇಡವೇ ಎಂಬ ಸವಾಲು ಆಯ್ಕೆ ಸಮಿತಿಯ ಮುಂದೆ ಎದುರಾಗಿತ್ತು. ಆದರೆ ಧೋನಿ ವಿಂಡೀಸ್ ಪ್ರವಾಸಕ್ಕೆ ಲಭ್ಯರಿಲ್ಲವೆಂದು ತಿಳಿಸಿದ್ದಾರೆ. ಇದರಿಂದಾಗಿ ಆಯ್ಕೆ ಸಮಿತಿಗೆ ಧೋನಿ ಆಯ್ಕೆ ವಿಚಾರದಲ್ಲಿದ್ದ ಸಮಸ್ಯೆ ದೂರವಾಗಿದೆ. 2020ರ ಟ್ವೆಂಟಿ-20 ವಿಶ್ವಕಪ್ ಮತ್ತು 2023ರ 50 ಓವರ್ಗಳ ವಿಶ್ವಕಪ್ಗೆ ಬಲಿಷ್ಠ ತಂಡವನ್ನು ರೂಪಿಸುವ ಉದ್ದೇಶಕ್ಕಾಗಿ ಆಯ್ಕೆ ಸಮಿತಿಯು ತಯಾರಿ ಆರಂಭಿಸಲಿದೆ.
►ನಂ.4 ಸ್ಥಾನಕ್ಕೆ ಪೈಪೋಟಿ: ಟೀಮ್ ಇಂಡಿಯಾಕ್ಕೆ ನಂ.4ನೇ ಸ್ಥಾನಕ್ಕೆ ಸಮರ್ಥ ಬ್ಯಾಟ್ಸ್ಮನ್ ಸಿಕ್ಕಿಲ್ಲ. ಕಳೆದ ವಿಶ್ವಕಪ್ನಲ್ಲಿ ಈ ಕೊರತೆ ಕಂಡು ಬಂದಿತ್ತು. ಅಂಬಟಿ ರಾಯುಡು ಅವರನ್ನು ಕಡೆಗಣಿಸಿದ ಬಳಿಕ ಈ ಸ್ಥಾನಕ್ಕೆ ಹಲವರು ಅವಕಾಶ ಗಿಟ್ಟಿಸಿಕೊಂಡರೂ, ಯಾರಿಗೂ ಈ ಸ್ಥಾನವನ್ನು ಭದ್ರಪಡಿಸಲು ಸಾಧ್ಯವಾಗಿಲ್ಲ.ಲೋಕೇಶ್ ರಾಹುಲ್ ಮೊದಲು ಅವಕಾಶ ಪಡೆದರು. ಬಳಿಕ ವಿಜಯ್ ಶಂಕರ್ಗೆ ಅವಕಾಶ ನೀಡಲಾಯಿತು. ಕೊನೆಗೆ ರಿಷಭ್ ಪಂತ್ಗೆ ಅದೃಷ್ಟ ಒಲಿಯಿತು. ವಿಜಯ್ ಗಾಯಗೊಂಡ ಕಾರಣದಿಂದಾಗಿ ವಿಶ್ವಕಪ್ನಲ್ಲಿ ಹೆಚ್ಚು ಪಂದ್ಯಗಳಲ್ಲಿ ಆಡಲು ಸಾಧ್ಯವಾಗಲಿಲ್ಲ. ಅವರು ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಈ ಕಾರಣದಿಂದಾಗಿ ಭಾರತ ‘ಎ’ ತಂಡದ ಪರ ವೆಸ್ಟ್ಇಂಡೀಸ್ಗೆ ಪ್ರವಾಸ ಕೈಗೊಂಡು ಮಿಂಚಿದ್ದ ಮನೀಷ್ ಪಾಂಡೆ, ಶುಭ್ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ.
►ತೆರವಾಗಿರುವ ವಿಕೆಟ್ ಕೀಪರ್ ಸ್ಥಾನ: ಧೋನಿ ವಿಂಡೀಸ್ ಪ್ರವಾಸದಿಂದ ದೂರ ಉಳಿದಿರುವ ಹಿನ್ನೆಲೆಯಲ್ಲಿ ದಿಲ್ಲಿಯ ವಿಕೆಟ್ ಕೀಪರ್ ರಿಷಭ್ ಪಂತ್ ಆ ಸ್ಥಾನವನ್ನು ತುಂಬಲಿದ್ದಾರೆ. ಅವರು ವಿಶ್ವಕಪ್ನ 4 ಪಂದ್ಯಗಳಲ್ಲಿ ಒಟ್ಟು 116 ರನ್ ಗಳಿಸಿದ್ದಾರೆ. ಗರಿಷ್ಠ ವೈಯಕ್ತಿಕ ಸ್ಕೋರ್ 48. ಎರಡು ಟೆಸ್ಟ್ಗಳ ಸರಣಿಗೆ ಭಾರತದ ನಂ.1 ವಿಕೆಟ್ ಕೀಪರ್ ವೃದ್ದಿಮಾನ್ ಸಹಾ ತಂಡಕ್ಕೆ ವಾಪಸಾಗುವ ಸಾಧ್ಯತೆ ಇದೆ.
► ಆರಂಭಿಕ ಬ್ಯಾಟ್ಸ್ಮನ್ ಸ್ಥಾನ: ಆರಂಭಿಕ ಬ್ಯಾಟ್ಸ್ಮನ್ ಹುದ್ದೆಗೆ ದಿಲ್ಲಿಯ ಆರಂಭಿಕ ದಾಂಡಿಗ ಶಿಖರ್ ಧವನ್ ಮರಳುವ ಸಾಧ್ಯತೆ ಇಲ್ಲ. ಗಾಯದಿಂದ ಚೇತರಿಸಿಕೊಂಡು ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ತಯಾರಿ ನಡೆಸುತ್ತಿದ್ದಾರೆ. ರಾಹುಲ್ ಜೊತೆಗೆ ಕರ್ನಾಟಕದ ತನ್ನ ಬಾಲ್ಯ ಸ್ನೇಹಿತ ಮಾಯಾಂಕ್ ಅಗರವಾಲ್ ಸ್ಥಾನ ಪಡೆಯಲಿದ್ದಾರೆ.
►ಕೊಹ್ಲಿ, ಬುಮ್ರಾಗೆ ವಿಶ್ರಾಂತಿ: ಸೀಮಿತ ಓವರ್ಗಳ ಕ್ರಿಕೆಟ್ ಸರಣಿಗೆ ನಾಯಕ ವಿರಾಟ್ ಕೊಹ್ಲಿ ಮತ್ತು ಬೌಲರ್ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲು ಆಯ್ಕೆ ಸಮಿತಿ ಬಯಸಿದೆ ಎಂದು ಗೊತ್ತಾಗಿದೆ.
►ಯುವ ಆಟಗಾರರಿಗೆ ಅವಕಾಶ: ವೇಗದ ಬೌಲರ್ಗಳಾದ ಜಸ್ಪ್ರೀತ್ ಬುಮ್ರಾ, ಮುಹಮ್ಮದ್ ಶಮಿ ಮತ್ತು ಭುವನೇಶ್ವರ ಕುಮಾರ್ , ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ವಿಶ್ರಾಂತಿ ಬಯಸಿದ್ದಾರೆ. ನವ್ದೀಪ್ ಸೈನಿ, ಖಲೀಲ್ ಅಹ್ಮದ್ ಮತ್ತು ದೀಪಕ್ ಚಹಾರ್ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ.