ಕಾಶ್ಮೀರ ಬೆಳವಣಿಗೆಯಿಂದ ಪ್ರಾದೇಶಿಕ ಶಾಂತಿಗೆ ಅಪಾಯ:
ಸೌದಿ ಅರೇಬಿಯದಲ್ಲಿ ಪಾಕ್ ವಿದೇಶ ಸಚಿವ
ಇಸ್ಲಾಮಾಬಾದ್, ಆ. 7: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ಭಾರತ ಸರಕಾರದ ಕ್ರಮವು ‘ಏಕಪಕ್ಷೀಯ ಹಾಗೂ ಅನ್ಯಾಯವಾಗಿದೆ’ ಹಾಗೂ ಅದು ಪ್ರಾದೇಶಿಕ ಶಾಂತಿಯನ್ನು ಅಪಾಯಕ್ಕೆ ಗುರಿಪಡಿಸುತ್ತದೆ ಎಂದು ಪಾಕಿಸ್ತಾನದ ವಿದೇಶ ಸಚಿವ ಶಾ ಮಹ್ಮೂದ್ ಕುರೇಶಿ ಹೇಳಿದ್ದಾರೆ.
‘‘ಅಫ್ಘಾನ್ ಶಾಂತಿ ಪ್ರಕ್ರಿಯೆಯು ಸರಾಗವಾಗಿ ಮುನ್ನಡೆಯುತ್ತಿದ್ದಾಗ, ಈ ಪರಿಸ್ಥಿತಿಯನ್ನು ಸೃಷ್ಟಿಸುವ ಮೂಲಕ ಭಾರತವು ವಿಘ್ನ ಸೃಷ್ಟಿಸಿದೆ’’ ಎಂದು ಸೌದಿ ಅರೇಬಿಯ ಪ್ರವಾಸದಲ್ಲಿರುವ ಅವರು ‘ಅರಬ್ ನ್ಯೂಸ್’ಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದರು.
ರವಿವಾರ ಸೌದಿ ಅರೇಬಿಯ ರಾಜಧಾನಿ ಜಿದ್ದಾದಲ್ಲಿ ಕಾಶ್ಮೀರ ಕುರಿತು ನಡೆಯಲಿರುವ ಇಸ್ಲಾಮಿಕ್ ಸಹಕಾರ ಸಂಘಟನೆಯ ತುರ್ತು ಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಅವರು ಜಿದ್ದಾಕ್ಕೆ ತೆರಳಿದ್ದಾರೆ.
‘‘ಸೂಕ್ಷ್ಮ ಘಟ್ಟದಲ್ಲಿ ಈ ರೀತಿಯ ವಿಘ್ನವು ವಲಯಕ್ಕೂ ಒಳಿತು ಉಂಟು ಮಾಡುವುದಿಲ್ಲ, ಅಮೆರಿಕದ ಹಿತಾಸಕ್ತಿಗೂ ಸಹಾಯ ಮಾಡುವುದಿಲ್ಲ. ಅವರು (ಭಾರತ) ವಾಸ್ತವಿಕವಾಗಿ ಶಾಂತಿ ಪ್ರಕ್ರಿಯೆಗೆ ತಡೆಯೊಡ್ಡಿದ್ದಾರೆ’’ ಎಂದರು.