ಸ್ವೀಡನ್ ಯುವತಿಯನ್ನು ಭೀಕರವಾಗಿ ಕೊಂದವನಿಗೆ ಲಂಕಾ ಅಧ್ಯಕ್ಷರಿಂದ ಕ್ಷಮೆ
ಕೊಲಂಬೊ, ನ. 10: ಸ್ವೀಡನ್ನ ಹದಿಹರೆಯದ ಯುವತಿಯೊಬ್ಬರನ್ನು ಬರ್ಬರವಾಗಿ ಹತ್ಯೆಗೈದುದಕ್ಕಾಗಿ ಗಲ್ಲು ಶಿಕ್ಷೆಗೆ ಒಳಗಾಗಿರುವ ಶ್ರೀಲಂಕಾದ ವ್ಯಕ್ತಿಯೊಬ್ಬನಿಗೆ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಕ್ಷಮಾದಾನ ನೀಡಿದ್ದಾರೆ ಎಂದು ಅಧಿಕಾರಿಗಳು ರವಿವಾರ ಹೇಳಿದ್ದಾರೆ.
ಅಧಿಕಾರದಿಂದ ಕೆಳಗಿಳಿಯಲು ಒಂದು ವಾರವಿರುವಾಗ ಅಧ್ಯಕ್ಷರು ಈ ಕ್ರಮ ತೆಗೆದುಕೊಂಡಿದ್ದು, ದೇಶಾದ್ಯಂತ ಆಕ್ರೋಶ ಸೃಷ್ಟಿಸಿದೆ.
ಅಧ್ಯಕ್ಷರ ಅತ್ಯಂತ ಅಸಂಗತ ಕ್ಷಮಾದಾನದ ಬಳಿಕ, ಅತ್ಯಂತ ಶ್ರೀಮಂತ ಹಾಗೂ ಪ್ರತಿಷ್ಠಿತ ಕುಟುಂಬದ ಹಂತಕ ಜೂಡ್ ಜಯಮಾಹ ಶನಿವಾರ ವೆಲಿಕಾಡ ಜೈಲಿನಿಂದ ಹೊರಹೋಗಿದ್ದಾನೆ.
ಶನಿವಾರ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯ ಬಳಿಕ ಸಿರಿಸೇನ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ. ಈ ಚುನಾವಣೆಯಲ್ಲಿ ಅವರು ಸ್ಪರ್ಧಿಸಿಲ್ಲ.
2005ರಲ್ಲಿ ಶ್ರೀಲಂಕಾಗೆ ವಿಹಾರಕ್ಕಾಗಿ ಬಂದಿದ್ದ ಬಲಿಪಶು ಯವೋನ್ ಜಾನ್ಸನ್ರನ್ನು ಕೊಲಂಬೋದ ಅಪಾರ್ಟ್ಮೆಂಟ್ ಕಟ್ಟಡವೊಂದರಲ್ಲಿ ಹಂತಕನು ಥಳಿಸಿ ಕೊಂದಿದ್ದನು. ಇಬ್ಬರ ನಡುವೆ ನಡೆದ ಜಗಳವು ಕೊಲೆಯಲ್ಲಿ ಪರ್ಯಾವಸಾನಗೊಂಡಿತ್ತು. ಯುವತಿಯ ತಲೆಬುರುಡೆಯು 64 ತುಂಡುಗಳಾಗಿ ಒಡೆದಿದೆ ಎಂದು ಮರಣೋತ್ತರ ಪರೀಕ್ಷೆ ವರದಿ ಹೇಳಿದೆ.