ಹಿಮಾವೃತ ನದಿಗೆ ಬಸ್ ಉರುಳಿ ಕನಿಷ್ಠ 19 ಮೃತ್ಯು
ಮಾಸ್ಕೊ, ಡಿ.1: ಪೂರ್ವ ಸೈಬೀರಿಯದಲ್ಲಿ ಹಿಮದಿಂದ ಹೆಪ್ಪುಗಟ್ಟಿದ ನದಿಗೆ ಬಸ್ ಬಿದ್ದು, ಅದರಲ್ಲಿದ್ದ 19 ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಇತರ 21ಮಂದಿ ಗಾಯಗೊಂಡಿದ್ದಾರೆ. ದುರಂತ ಸಂಭವಿಸಿದ ಸಂದರ್ಭ ಬಸ್ನಲ್ಲಿ 40ಕ್ಕೂ ಅಧಿಕ ಮಂದಿ ಪ್ರಯಾಣಿಕರಿದ್ದರೆಂದು ತಿಳಿದುಬಂದಿದೆ.
ಪೂರ್ವ ಸೈಬೀರಿಯದ ಝಬೈಕಾಲ್ಸ್ಕಿ ಪ್ರಾಂತದಲ್ಲಿ ಈ ದುರ್ಘಟನೆ ನಡೆದಿದೆ. ಕುಯೆಗಾ ನದಿಯ ಮೇಲಿನ ಸೇತುವೆಯನ್ನು ಬಸ್ ದಾಟುತ್ತಿದ್ದಾಗ ಅದರ ಟೈರೊಂದು ಸ್ಪೋಟಿಸಿದೆ. ಆಗ ಅದು ರಸ್ತೆಯಿಂದ ಜಾರಿ, ಹಿಮಾವೃತವಾದ ನದಿಗೆ ಬಿತ್ತೆಂದು ಅಧಿಕೃತ ಮೂಲಗಳು ತಿಳಿಸಿವೆ. ಅಪಘಾತದ ಸಂತ್ರಸ್ತರಿಗೆ ವೈದ್ಯಕೀಯ ಕಾರ್ಯಕರ್ತರೊಂದಿಗೆ ಎರಡು ಹೆಲಿಕಾಪ್ಟರ್ಗಳನ್ನು ಘಟನಾ ಸ್ಥಳಕ್ಕೆ ರವಾನಿಸಲಾಗಿದೆ. ಸುರಕ್ಷತಾ ನಿಯಮಗಳ ಉಲ್ಲಂಘನೆಯಾಗಿರುವ ಸಾಧ್ಯತೆ ಇದೆಯೇ ಎಂಬ ಬಗ್ಗೆ ತನಿಖೆ ಆದೇಶಿಸಲಾಗಿದೆಯೆಂದು ರಶ್ಯದ ತನಿಖಾ ಸಂಸ್ಥೆ ತಿಳಿಸಿದೆ.
Next Story