ಮೋದಿ 'ದ್ವೇಷದ ಸಂಕೇತ'ವಾದರೆ, ಪ್ರತಿಭಟನೆಗಳು 'ಭರವಸೆಯ ಆಶಾಕಿರಣ': HBO ಕಾರ್ಯಕ್ರಮದಲ್ಲಿ ಜಾನ್ ಆಲಿವರ್
ಹೊಸದಿಲ್ಲಿ: ಇಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಹ್ಮದಾಬಾದ್ನ ಮೊಟೇರಾ ಸ್ಟೇಡಿಯಂನಲ್ಲಿ ``ಪ್ರಧಾನಿ ಮೋದಿ ಭಾರತದ ಹೆಮ್ಮೆ'' ಎಂದು ಗುಣಗಾನ ಮಾಡಿದ್ದರೆ, ಅತ್ತ ಅಮೆರಿಕಾದಲ್ಲಿ ರವಿವಾರ ರಾತ್ರಿ ಎಚ್ ಬಿಒ ವಾಹಿನಿಯಲ್ಲಿ ಪ್ರಸಾರವಾದ ಕಾಮಿಡಿಯನ್ ಜಾನ್ ಆಲಿವರ್ ಅವರು ತಮ್ಮ 'ಲಾಸ್ಟ್ ವೀಕ್ ಟುನೈಟ್ ವಿದ್ ಜಾನ್ ಆಲಿವರ್' ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಆಡಳಿತ `ನಿಜವಾಗಿಯೂ ಅಪಾಯಕಾರಿ' ಎಂದು ಹೇಳಿದ್ದಾರಲ್ಲದೆ, ಪ್ರಧಾನಿ ಮೋದಿಯ ವರ್ಚಸ್ಸು 'ದ್ವೇಷದ ತಾತ್ಕಾಲಿಕ ಸಂಕೇತವಾಗಿದೆ' ಎಂದರು.
ಸಿಎಎ-ಎನ್ಆರ್ಸಿ ವಿವಾದ, ದೇಶವ್ಯಾಪಿ ಪ್ರತಿಭಟನೆಗಳು ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಮೇಲಿನ ದಾಳಿಯ ಕುರಿತಂತೆಯೂ ಮಾತನಾಡಿದ ಅವರು, "ಸಿಎಎ-ಎನ್ಆರ್ ಸಿ ಕೋಟ್ಯಂತರ ಮುಸ್ಲಿಮರ ಪೌರತ್ವವನ್ನು ಕಿತ್ತುಕೊಳ್ಳುವ ಅತ್ಯಂತ ಚಾಣಾಕ್ಷ ಎರಡು ಹಂತದ ಕ್ರಮವಾಗಿದೆ" ಎಂದರಲ್ಲದೆ, "ಸಿಎಎ ಎನ್ಆರ್ಸಿ ವಿರುದ್ಧದ ಪ್ರತಿಭಟನೆಗಳು ಭರವಸೆಯ ಆಶಾಕಿರಣವಾಗಿದೆ'' ಎಂದರು.
"ಮೋದಿ ಅಧಿಕಾರಕ್ಕೆ ಬಂದಂದಿನಿಂದ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಹೆಚ್ಚಾಗಿವೆ, ಈ ಹಾದಿಯಲ್ಲಿ ಭಾರತ ಸಾಗುತ್ತಿರುವುದು ನೋಡಿದಾಗ ದುಃಖವಾಗುತ್ತದೆ'' ಎಂದರು.
"ಮೋದಿ ಒಬ್ಬ ವಿವಾದಾತ್ಮಕ ವ್ಯಕ್ತಿತ್ವ. ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಅಧಿಕವಾಗುತ್ತಿದ್ದು, ದೌರ್ಜನ್ಯ ಅದೆಷ್ಟು ಹೆಚ್ಚಾಗಿದೆಯೆಂದರೆ ಕಳೆದೆರಡು ತಿಂಗಳುಗಳಿಂದ ಭಾರತೀಯರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ" ಎಂದು ಆಲಿವರ್ ಹೇಳಿದರು.