ಯುಎನ್ ಸೆಕ್ರೆಟರಿ ಜನರಲ್ ಪ್ರತಿನಿಧಿ ಸ್ಥಾನಕ್ಕೆ ಭಾರತದ ಸುಧೀರ್ ರಾಜ್ ಕುಮಾರ್ ರಾಜೀನಾಮೆ
ನ್ಯೂಯಾರ್ಕ್ , ಮಾ.30: ವಿಶ್ವಸಂಸ್ಥೆಯ ಜಂಟಿ ಸಿಬ್ಬಂದಿ ಪಿಂಚಣಿ ನಿಧಿಯ ಆಸ್ತಿಗಳ ಹೂಡಿಕೆಗೆ ಯುಎನ್ ಸೆಕ್ರೆಟರಿ ಜನರಲ್ ಪ್ರತಿನಿಧಿಯಾಗಿದ್ದ ಭಾರತದ ಹಿರಿಯ ಅಧಿಕಾರಿ ಸುಧೀರ್ ರಾಜ್ಕುಮಾರ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸುಧೀರ್ ರಾಜ್ಕುಮಾರ್ ಅವರನ್ನು ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರು ಅಕ್ಟೋಬರ್ 2017 ರಲ್ಲಿ ನೇಮಕ ಮಾಡಿದ್ದರು. ರಾಜೀನಾಮೆಗೆ ಯಾವುದೇ ಕಾರಣವನ್ನು ಹೇಳಿಕೆಯಲ್ಲಿ ತಿಳಿಸಿಲ್ಲ.
ಮಾರ್ಚ್ 31 ರಂದು ಜಾರಿಗೆ ಬರುವಂತೆ ಸುಧೀರ್ ರಾಜ್ಕುಮಾರ್ ರಾಜೀನಾಮೆ ನೀಡಿರುವುದಾಗಿ ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರ ಕಚೇರಿಯ ವಕ್ತಾರ ಗುಟೆರೆಸ್ ವಕ್ತಾರ ಸ್ಟೀಫನ್ ಡುಜಾರಿಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುಟೆರೆಸ್ ಸುಧೀರ್ ರಾಜ್ಕುಮಾರ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ ಮತ್ತು ವಿಶ್ವಸಂಸ್ಥೆಯ ಜಂಟಿ ಸಿಬ್ಬಂದಿ ಪಿಂಚಣಿ ನಿಧಿಯ ಸೊತ್ತುಗಳನ್ನು ನಿರ್ವಹಿಸುವಲ್ಲಿ ಅವರು ಮಾಡಿದ ಸೇವೆಗೆ ಕೃತಜ್ಞತೆ ಸಲ್ಲಿಸಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ಯುಎನ್ ನೇಮಕಾತಿಗೆ ಮೊದಲು ರಾಜ್ಕುಮಾರ್ ವಿಶ್ವಬ್ಯಾಂಕ್ ಖಜಾನೆಯಲ್ಲಿ ಜಾಗತಿಕ ಪಿಂಚಣಿ ಸಲಹಾ ಕಾರ್ಯಕ್ರಮದ ಮುಖ್ಯಸ್ಥರಾಗಿದ್ದರು
ಅವರು ಚಿಕಾಗೊ ವಿಶ್ವವಿದ್ಯಾಲಯದಿಂದ ಎಂಬಿಎ, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಿಂದ ಅರ್ಥಶಾಸ್ತ್ರದಲ್ಲಿ ಎಂ.ಸ್ಸಿ ಮತ್ತು ದಿಲ್ಲಿ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ನಲ್ಲಿ ಬಿ.ಎಸ್ಸಿ ಪದವಿ ಪಡೆದಿದ್ದಾರೆ