ನೇಪಾಳ: ಮೇಲ್ಜಾತಿಯ ಗುಂಪಿನಿಂದ ನಾಲ್ವರು ದಲಿತರು ಸೇರಿದಂತೆ ಆರು ಯುವಕರ ಹತ್ಯೆ
ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯಕ್ಕೆ ದೂರು ನೀಡಲಿರುವ ಸಾಮಾಜಿಕ ಹೋರಾಟಗಾರರು
ಸಾಂದರ್ಭಿಕ ಚಿತ್ರ
ಕಠ್ಮಂಡು,ಜೂ.6: ರುಕುಮ್ ಜಿಲ್ಲೆಯ ಸೋತಿ ಗ್ರಾಮದಲ್ಲಿ ಮೇಲ್ಜಾತಿಯ ಗುಂಪಿನಿಂದ ಹತ್ಯೆಗೀಡಾದ ದಲಿತ ಯುವಕ ನಬರಾಜ್ (21) ಮತ್ತು ಆತನ ಐವರು ಸ್ನೇಹಿತರಿಗೆ ನ್ಯಾಯಕ್ಕಾಗಿ ನಾಗರಿಕ ಸಮಾಜ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ. ಆರೋಪಿಗಳ ವಿರುದ್ಧ ಹೇಗ್ನಲ್ಲಿರುವ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ಐಸಿಸಿ)ಕ್ಕೆ ದೂರು ಸಲ್ಲಿಸಲು ನೇಪಾಳದಲ್ಲಿಯ ಮಾನವ ಹಕ್ಕುಗಳ ಗುಂಪುಗಳು ಯೋಜಿಸುತ್ತಿವೆ.
ಜಾಜರ್ಕೋಟ್ ಜಿಲ್ಲೆಯ ನಿವಾಸಿ ನಬರಾಜ್ ಕಳೆದ ಮೂರು ವರ್ಷಗಳಿಂದಲೂ ರುಕುಮ್ ಜಿಲ್ಲೆಯಲ್ಲಿ ತನ್ನ 19ರ ಹರೆಯದ ಗೆಳತಿಯನ್ನು ಭೇಟಿಯಾಗುತ್ತಿದ್ದ. ನೇಪಾಳದಲ್ಲಿ ಲಾಕ್ಡೌನ್ ನಡುವೆಯೇ ಮೇ 23ರಂದು ನಬರಾಜ್ಗೆ ದೂರವಾಣಿ ಕರೆಯನ್ನು ಮಾಡಿದ್ದ ಗೆಳತಿ ತಾನು ಆತನೊಂದಿಗೆ ಪರಾರಿಯಾಗಲು ಬಯಸಿದ್ದೇನೆ,ಹೀಗಾಗಿ ತಕ್ಷಣ ತನ್ನ ಮನೆಗೆ ಬರುವಂತೆ ತಿಳಿಸಿದ್ದಳು. ನಬರಾಜ್ ತನ್ನ 15 ಸ್ನೇಹಿತರ ಜೊತೆ ಗೆಳತಿಯ ಮನೆಯನ್ನು ತಲುಪಿದಾಗ ಸುಮಾರು 100ರಷ್ಟಿದ್ದ ಗ್ರಾಮಸ್ಥರ ಗುಂಪು ಅವರನ್ನು ಸುತ್ತುವರಿದಿತ್ತು. ಈ ವೇಳೆ ನಬರಾಜ್ನ ಹೆಚ್ಚಿನ ಸ್ನೇಹಿತರು ಪರಾರಿಯಾಗಿದ್ದರು. ಕೈಗೆ ಸಿಕ್ಕಿದ್ದ ನಬರಾಜ್ ಮತ್ತು ಇತರ ಐವರನ್ನು ಗುಂಪು ಹತ್ಯೆ ಮಾಡಿ ಅವರ ಶವಗಳನ್ನು ಭೇರಿ ನದಿಗೆಸೆದಿತ್ತು.
ನಬರಾಜ್ ಬಿ.ಕೆ.,ಟಿಕಾರಾಮ ಸುನಾರ್,ಗಣೇಶ ಬುದ್ಧ,ಲೋಕೇಂದ್ರ ಸುನಾರ್,ಗೋವಿಂದ ಶಾಹಿ ಮತ್ತು ಸಂದೀಪ ಬಿ.ಕೆ.ಅವರು ಕೊಲೆಯಾದ ಯುವಕರಾಗಿದ್ದು,ಈ ಪೈಕಿ ನಾಲ್ವರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದರು.
ಸ್ಥಳೀಯ ವಾರ್ಡ್ ಅಧ್ಯಕ್ಷ ಕೂಡ ಗುಂಪಿನಲ್ಲಿದ್ದ ಎಂದು ಜೀವಸಹಿತ ಪಾರಾಗಿರುವ ಸುದೀಪ್ ಖಾಡ್ಕಾ ತಿಳಿಸಿದ. ಗುಂಪಿನ ದಾಳಿಯಿಂದ ಗಾಯಗೊಂಡಿದ್ದ ಆತನ ಕುತ್ತಿಗೆಯಲ್ಲಿ ಈಗಲೂ ಖಡ್ಗದ ಗಾಯದ ಗುರುತುಗಳಿವೆ.
ಇದು ನೇಪಾಳದಲ್ಲಿ ಜಾತಿ ಆಧಾರಿತ ಹಿಂಸಾಚಾರಕ್ಕೆ ಇತ್ತೀಚಿನ ಉದಾಹರಣೆಯಾಗಿದೆ ಎಂದು ‘ಆಹುತಿ‘ ಎಂದೇ ಖ್ಯಾತರಾಗಿರುವ ಲೇಖಕ, ಮಾಜಿ ಸಂಸದ ಮತ್ತು ನೇಪಾಳದ ದಲಿತ ಸಮುದಾಯದ ನಾಯಕ ಬಿಶ್ವ ಭಕ್ತ ದುಲಾಲ್ ಅವರು,ಇದು ಆಧುನಿಕ ನೇಪಾಳಕ್ಕೆ ಯಾತನಾದಾಯಕ ಮತ್ತು ನಾಚಿಕೆಗೇಡಿನ ಘಳಿಗೆಯಾಗಿದೆ. ಸಾವಿರರು ವರ್ಷಗಳಿಂದಲೂ ನೇಪಾಳದ ದಲಿತರು ವ್ಯವಸ್ಥಿತ ಹಿಂಸಾಚಾರವನ್ನು ಎದುರಿಸುತ್ತಿದ್ದಾರೆ ಎಂದರು.
ನಬರಾಜ್ ಮತ್ತು ಆತನ ಸ್ನೇಹಿತರಿಗೆ ನ್ಯಾಯವೊದಗಿಸುವಂತೆ ಹ್ಯೂಮನ್ ರೈಟ್ಸ್ ಗ್ರುಪ್ಸ್ ನೇಪಾಳ ಸರಕಾರವನ್ನು ಆಗ್ರಹಿಸಿದೆ.
ಈ ಹತ್ಯೆಗಳ ಬಗ್ಗೆ ತನಿಖೆ ನಡೆಸಲು ನೇಪಾಳದ ಗೃಹಸಚಿವಾಲಯವು ಮೇ 29ರಂದು ಐವರು ಸದಸ್ಯರ ತಂಡವನ್ನು ರಚಿಸಿದೆ. ತನ್ಮಧ್ಯೆ ಪ್ರಾಂತೀಯ ಅಸೆಂಬ್ಲಿ ಸದಸ್ಯರ ತಂಡವೊಂದು ಇದೊಂದು ಪೂರ್ವಯೋಜಿತ ಹತ್ಯಾಕಾಂಡ ಎಂಬ ನಿರ್ಧಾರಕ್ಕೆ ಬಂದಿದೆ.