ಅಮೆರಿಕದಲ್ಲಿ ಮುಂಬೈ ಭಯೋತ್ಪಾದಕ ದಾಳಿಯ ಸಂಚುಕೋರ ತಹವ್ವರ್ ರಾಣಾ ಮರು ಬಂಧನ
ಭಾರತಕ್ಕೆ ಗಡಿಪಾರು ಸಂಭವ
ವಾಶಿಂಗ್ಟನ್, ಜೂ. 20: 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಶಾಮೀಲಾಗಿದ್ದ ಪಾಕಿಸ್ತಾನ ಮೂಲದ ಕೆನಡಿಯನ್ ಉದ್ಯಮಿ ತಹವ್ವರ್ ರಾಣಾ ಎಂಬವನನ್ನು ಅಮೆರಿಕದ ಲಾಸ್ ಏಂಜಲಿಸ್ ನಗರದಲ್ಲಿ ಬಂಧಿಸಲಾಗಿದೆ. ಪ್ರಕರಣದ ವಿಚಾರಣೆ ಎದುರಿಸುವುದಕ್ಕಾಗಿ ಆತನನ್ನು ಗಡಿಪಾರು ಮಾಡುವಂತೆ ಭಾರತ ಸಲ್ಲಿಸಿದ ಮನವಿಯ ಮೇರೆಗೆ ಅಮೆರಿಕದ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದು ಅಮೆರಿಕದ ಪ್ರಾಸಿಕ್ಯೂಟರ್ಗಳು ತಿಳಿಸಿದ್ದಾರೆ.
ಉಗ್ರ ಹಫೀಝ್ ಸಯೀದ್ ನೇತೃತ್ವದ ಪಾಕಿಸ್ತಾನದ ಲಷ್ಕರೆ ತಯ್ಯಬ ಭಯೋತ್ಪಾದಕ ಸಂಘಟನೆಯು 2008 ನವೆಂಬರ್ನಲ್ಲಿ ಮುಂಬೈ ಮೇಲೆ ನಡೆಸಿದ ಭೀಕರ ದಾಳಿಯಲ್ಲಿ 166 ಮಂದಿ ಮೃತಪಟ್ಟಿದ್ದಾರೆ.
59 ವರ್ಷದ ತಹವ್ವರ್ ರಾಣಾನನ್ನು ಇತ್ತೀಚೆಗೆ ಜೈಲಿನಿಂದ ಅನುಕಂಪದ ಆಧಾರದಲ್ಲಿ ಬಿಡುಗಡೆ ಮಾಡಲಾಗಿತ್ತು." ನಾನು ಕೋವಿಡ್-19 ಕಾಯಿಲೆಯಿಂದ ಬಳಲುತ್ತಿದ್ದೇನೆ" ಎಂದು ಆತ ನ್ಯಾಯಾಲಯಕ್ಕೆ ಹೇಳಿದ ಬಳಿಕ ಆತನ ಬಿಡುಗಡೆಗೆ ನ್ಯಾಯಾಲಯ ಆದೇಶಿಸಿತ್ತು.
ಅವನನ್ನು ಗಡಿಪಾರು ಮಾಡುವಂತೆ ಭಾರತ ಮಾಡಿರುವ ಮನವಿಯ ಮೇರೆಗೆ ಅವನನ್ನು ಜೂನ್ 10ರಂದು ಲಾಸ್ ಏಂಜಲಿಸ್ನಲ್ಲಿ ಮತ್ತೆ ಬಂಧಿಸಲಾಯಿತು ಎಂದು ಪ್ರಾಸಿಕ್ಯೂಟರ್ಗಳು ಹೇಳಿದರು.
1997ರಲ್ಲಿ ಸಹಿ ಹಾಕಲಾದ ದ್ವಿಪಕ್ಷೀಯ ಗಡಿಪಾರು ಒಪ್ಪಂದದಂತೆ ತಹವ್ವರ್ ರಾಣಾನನ್ನು ಬಂಧಿಸಿ ಗಡಿಪಾರು ಮಾಡುವಂತೆ ಭಾರತ ಸರಕಾರವು ಮನವಿ ಸಲ್ಲಿಸಿದೆ ಎಂದು ಅಮೆರಿಕದ ಸಹಾಯಕ ಅಟಾರ್ನಿ ಜಾನ್ ಜೆ. ಲುಲಿಜಿಯನ್ ನ್ಯಾಯಾಲಯಕ್ಕೆ ಹೇಳಿದರು.
ಕೊಲೆಗೆ ಸಂಚು ರೂಪಿಸಿರುವುದು ಸೇರಿದಂತೆ ಭಾರತದಲ್ಲಿ ಹಲವಾರು ಅಪರಾಧ ಪ್ರಕರಣಗಳಲ್ಲಿ ಆತನ ವಿಚಾರಣೆ ನಡೆಯುತ್ತಿದೆ ಎಂಬುದಾಗಿ ಭಾರತ ಅಮೆರಿಕಕ್ಕೆ ಮಾಹಿತಿ ನೀಡಿದೆ ಎಂದು ಲುಲಿಜಿಯನ್ ತಿಳಿಸಿದರು. ಬಂಧನದ ಬಳಿಕ ರಾಣಾನನ್ನು ಜೂನ್ 11ರಂದು ಮೊದಲ ಬಾರಿಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಭಾರತದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯ ವಿಶೇಷ ನ್ಯಾಯಾಲಯವೊಂದು 2018 ಆಗಸ್ಟ್ನಲ್ಲಿ ತಹವ್ವರ್ ರಾಣಾ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು.
ಪಾಕಿಸ್ತಾನದಲ್ಲಿ ಕೋಲ್ಮನ್ ಹೆಡ್ಲಿ ಜೊತೆಗೆ ಪಿತೂರಿ
2006 ಮತ್ತು 2008ರ ನಡುವೆ, ತಹವ್ವರ್ ರಾಣಾನು ಪಾಕಿಸ್ತಾನದಲ್ಲಿ ತನ್ನ ಬಾಲ್ಯದ ಗೆಳೆಯ ಡೇವಿಡ್ ಕೋಲ್ಮನ್ ಹೆಡ್ಲಿ ಮತ್ತು ಇತರರೊಂದಿಗೆ ಸೇರಿ, ಮುಂಬೈ ದಾಳಿಯ ಯೋಜನೆಯನ್ನು ಸಿದ್ಧಪಡಿಸುವ ಮತ್ತು ಕಾರ್ಯಗತಗೊಳಿಸುವ ಪಿತೂರಿಯಲ್ಲಿ ಲಷ್ಕರೆ ತಯ್ಯಬ ಮತ್ತು ಹರ್ಕತುಲ್ ಜಿಹಾದೆ ಇಸ್ಲಾಮಿ ಎಂಬ ಭಯೋತ್ಪಾದಕ ಗುಂಪುಗಳಿಗೆ ನೆರವು ನೀಡುವ ಕಾರ್ಯದಲ್ಲಿ ತೊಡಗಿದ್ದನು ಎಂದು ಪ್ರಾಸಿಕ್ಯೂಟರ್ಗಳು ಹೇಳಿದ್ದಾರೆ.
ತಹವ್ವರ್ ರಾಣಾನನ್ನು ಮೊದಲು 2009ರಲ್ಲಿ ಶಿಕಾಗೊದಲ್ಲಿ ಬಂಧಿಸಲಾಗಿತ್ತು. ಬಳಿಕ ಅಮೆರಿಕದಲ್ಲೇ ಆತನ ವಿಚಾರಣೆ ನಡೆಯಿತು. ವಿಚಾರಣೆಯ ವೇಳೆ, ಹೆಡ್ಲಿಯು ರಾಣಾ ವಿರುದ್ಧ ಸಾಕ್ಷಿ ಹೇಳಿದನು.
ಅವನ ವಿರುದ್ಧದ ಡೆನ್ಮಾರ್ಕ್ನಲ್ಲಿ ಭಯೋತ್ಪಾದನೆಗೆ ಸಲಕರಣೆಗಳನ್ನು ಪೂರೈಸಿದ ಹಾಗೂ ಲಷ್ಕರೆ ತಯ್ಯಬಕ್ಕೆ ಸಲಕರಣೆಗಳನ್ನು ಪೂರೈಸಿದ ಎರಡು ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾದವು. ಆದರೆ, ಅವನ ವಿರುದ್ಧದ ಭಾರತದಲ್ಲಿ ಭಯೋತ್ಪಾದನೆಗೆ ವಸ್ತು ರೂಪದಲ್ಲಿ ಬೆಂಬಲ ನೀಡಿರುವ ಆರೋಪದಲ್ಲಿ ನ್ಯಾಯಾಲಯವು ಆತನನ್ನು ದೋಷಮುಕ್ತಿಗೊಳಿಸಿತು.