ವಿಶ್ವಸಂಸ್ಥೆಯಲ್ಲಿ ‘ಜಮ್ಮುಕಾಶ್ಮೀರ ’ ಕೆದಕಲು ಪಾಕ್ ವಿಫಲ ಯತ್ನ
ಭದ್ರತಾ ಮಂಡಳಿಯ ವಿಸ್ತರಣೆಗೂ ವಿರೋಧ
ವಿಶ್ವಸಂಸ್ಥೆ, ಜು.15: ಕೋವಿಡ್-19ನಂತಹ ಜಾಗತಿಕ ಬಿಕ್ಕಟ್ಟಿಗೆ ಪರಿಣಾಮಕಾರಿಯಾದ ಪ್ರತಿಕ್ರಿಯಾತ್ಮಕ ಕ್ರಮಗಳನ್ನು ರೂಪಿಸಲು ಶುಕ್ರವಾರ ಆಯೋಜಿಸಲಾಗಿದ್ದ ವಿಶ್ವಸಂಸ್ಥೆಯ ಉನ್ನತ ಮಟ್ಟದ ಸಭೆಯಲ್ಲಿ ಪಾಕಿಸ್ತಾನವು ಜಮ್ಮುಕಾಶ್ಮೀರ ವಿವಾದವನ್ನು ಕೆದಕಲು ವಿಫಲ ಯತ್ನ ನಡೆಸಿದೆ ಮತ್ತು ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವದ ರಾಷ್ಟ್ರಗಳ ಸಂಖ್ಯೆಯನ್ನು ಹೆಚ್ಚಿಸುವ ಪ್ರಸ್ತಾವಕ್ಕೂ ವಿರೋಧ ವ್ಯಕ್ತಪಡಿಸಿದೆ.
ಕೋವಿಡ್ 19 ಆನಂತರದ ಬಹುಪಕ್ಷೀಯವಾದ: ‘75ನೇ ವರ್ಷಾಚರಣೆ ಸಂದರ್ಭದಲ್ಲಿ ಯಾವ ರೀತಿಯ ವಿಶ್ವಸಂಸ್ಥೆಯ ಅಗತ್ಯ ನಮಗಿದೆ’ ಎಂಬ ಶೀರ್ಷಿಕೆಯಡಿ ಉನ್ನತ ಮಟ್ಟದ ವಿಚಾರ ಸಂಕಿರಣವನ್ನು ವಿಶ್ವಸಂಸ್ಥೆ ಏರ್ಪಡಿಸಿತ್ತು.
ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಶಾ ಮಹಮೂದ್ ಖುರೇಷಿ ಅವರು ಸಮಾವೇಶದಲ್ಲಿ ಮಾತನಾಡಿ, ‘‘ ಜಮ್ಮುಕಾಶ್ಮೀರದ ಜನತೆಯ ಮೇಲೆ ಎಸಗಲಾಗುತ್ತಿರುವ ದಬ್ಬಾಳಿಕೆ ಹಾಗೂ ದೌರ್ಜನ್ಯಗಳ ಬಗ್ಗೆ ಪಾಕಿಸ್ತಾನವು ಕಳವಳಗೊಂಡಿದೆ ’’ಎಂದರು.
ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರಗಳಿಗೆ ಭಾರತದ ಸೇರ್ಪಡೆಯ ಪ್ರಸ್ತಾವವನ್ನು ಕೂಡಾ ಖುರೇಷಿ, ಪರೋಕ್ಷವಾಗಿ ವಿರೋಧಿಸಿದರು. ಅಧಿಕಾರ ಹಾಗೂ ಸವಲತ್ತುಗಳನ್ನು ಬಯಸುವವರ ಸಂಕುಚಿತ ಆಕಾಂಕ್ಷ್ಷೆಗಳನ್ನು ಈಡೇರಿಸುವುದಕ್ಕಾಗಿ ಭದ್ರತಾ ಮಂಡಳಿಯನ್ನು ವಿಸ್ತರಿಸುವುದರಿಂದ ವಿಶ್ವಸಂಸ್ಥೆ ಬಲಯುತವಾಗಲಾರದು ಬದಲಾಗಿ ನಿಷ್ಕ್ರಿಯವಾಗಲಿದೆ ಎಂದವರು ಅಭಿಪ್ರಾಯಿಸಿದರು.
ವಿಶ್ವಸಂಸ್ಥೆ ನೇತೃತದ ಜಾಗತಿಕ ಸುವ್ಯವಸ್ಥೆಯಲ್ಲಿ ಸಣ್ಣ ಹಾಗೂ ಮಧ್ಯಮ ಗಾತ್ರದ ದೇಶಗಳಿಗೆ ಅತಿ ಹೆಚ್ಚಿನ ಭಾದ್ಯತೆಯಿದ್ದು, ಅವು ಅಂತಾರಾಷ್ಟ್ರೀಯ ಶಾಂತಿ ಹಾಗೂ ಸುಭದ್ರತೆಯನ್ನು ಉತ್ತೇಜಿಸಲು ಪರಿಣಾಮಕಾರಿಯಾಗಿ ನೆರವಾಗಬಲ್ಲವು ಎಂದು ಖುರೇಷಿ ಪ್ರತಿಪಾದಿಸಿದರು.
ಭದ್ರತಾ ಮಂಡಳಿಯನ್ನು ಸುಧಾರಣೆಗೊಳಿಸಬೇಕಿದ್ದು, ಖಾಯಂ ಸದಸ್ಯ ರಾಷ್ಟ್ರಗಳ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಬಲವಾಗಿ ಆಗ್ರಹಿಸುತ್ತಿರುವ ರಾಷ್ಟ್ರಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯನಾಗಲು ತಾನು ಸೂಕ್ತವಾದ ಅರ್ಹತೆಯನ್ನು ಹೊಂದಿರುವುದಾಗಿ ಭಾರತದ ವಾದವಾಗಿದೆ.