ಲೆಬನಾನ್: ಬೆಂಕಿಯಿಂದಾಗಿ ಮಾನವೀಯ ನೆರವು ಕಾರ್ಯಕ್ಕೆ ತಡೆ: ರೆಡ್ಕ್ರಾಸ್
ಬೈರೂತ್ (ಲೆಬನಾನ್), ಸೆ. 11: ಲೆಬನಾನ್ ರಾಜಧಾನಿ ಬೈರೂತ್ನ ಬಂದರಿನಲ್ಲಿರುವ ತನ್ನ ಆಹಾರ ಧಾನ್ಯ ಸಂಗ್ರಹಾಗಾರಕ್ಕೆ ಬೆಂಕಿ ಬಿದ್ದಿರುವುದರಿಂದ ತನ್ನ ಮಾನವೀಯ ನೆರವು ಕಾರ್ಯಾಚರಣೆಗೆ ಗಂಭೀರ ಅಪಾಯ ಎದುರಾಗಿದೆ ಎಂದು ಅಂತರ್ರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿ (ಐಸಿಆರ್ಸಿ) ಗುರುವಾರ ಹೇಳಿದೆ.
‘‘ಬೆಂಕಿ ಬಿದ್ದಿರುವ ಉಗ್ರಾಣದಲ್ಲಿ ಐಸಿಆರ್ಸಿಯು ಸಾವಿರಾರು ಆಹಾರ ಪೊಟ್ಟಣಗಳು ಮತ್ತು 5 ಲಕ್ಷ ಲೀಟರ್ ಎಣ್ಣೆಯನ್ನು ಸಂಗ್ರಹಿಸಿಡಲಾಗಿತ್ತು’’ ಎಂದು ರೆಡ್ಕ್ರಾಸ್ನ ಪ್ರಾದೇಶಿಕ ನಿರ್ದೇಶಕ ಫ್ಯಾಬ್ರಿಝಿಯೊ ಕಾರ್ಬೋನಿ ಹೇಳಿದ್ದಾರೆ.
‘‘ನಷ್ಟದ ಪ್ರಮಾಣವನ್ನು ಇನ್ನಷ್ಟೇ ಲೆಕ್ಕಹಾಕಬೇಕಾಗಿದೆ. ಬೆಂಕಿಯಿಂದಾಗಿ ನಮ್ಮ ಮಾನವೀಯ ನೆರವು ಕಾರ್ಯಾಚರಣೆಗೆ ಗಂಭೀರ ಅಪಾಯ ಎದುರಾಗಿದೆ’’ ಎಂದು ಅವರು ತಿಳಿಸಿದ್ದಾರೆ.
ಬೆಂಕಿ ಬುಡಮೇಲು ಕೃತ್ಯ?: ಬೈರೂತ್ ಅಧ್ಯಕ್ಷ ಸಂಶಯ
ಬೈರೂತ್ ಬಂದರಿನಲ್ಲಿ ಗುರುವಾರ ಕಾಣಿಸಿಕೊಂಡಿರುವ ಬೆಂಕಿಯು ಉದ್ದೇಶಪೂರ್ವಕ ಬುಡಮೇಲು ಕೃತ್ಯವಾಗಿರಬಹುದು, ತಾಂತ್ರಿಕ ದೋಷದ ಫಲವಾಗಿರವಾಗಿರಬಹುದು, ಅಜ್ಞಾನದಿಂದ ಸಂಭವಿಸಿರಬಹುದು ಅಥವಾ ನಿರ್ಲ್ಷಕ್ಷ ಕಾರಣವಿರಬಹುದು ಎಂದು ಲೆಬನಾನ್ ಅಧ್ಯಕ್ಷ ಮೈಕಲ್ ಔನ್ ಹೇಳಿದ್ದಾರೆ.
‘‘ಅದು ಏನೇ ಇದ್ದರೂ, ಬೆಂಕಿಯ ಕಾರಣವು ಎಷ್ಟು ಸಾಧ್ಯವೋ ಅಷ್ಟು ಬೇಗ ಗೊತ್ತಾಗಬೇಕು ಹಾಗೂ ಅದಕ್ಕೆ ಕಾರಣರಾದವರನ್ನು ಹೊಣೆಗಾರರಾಗಿಸಬೇಕು’’ ಎಂದು ಅವರು ಹೇಳಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ.