ನಾವು ಏಕೆ ಏಕಾಂಗಿಯಾಗಿದ್ದೇವೆ?
ಶರೀಫ್ಗೆ ಪ್ರತಿಪಕ್ಷಗಳ ಪ್ರಶ್ನೆ
ಪಾಕಿಸ್ತಾನದಲ್ಲಿ ನಡೆಯಬೇಕಾಗಿದ್ದ ಸಾರ್ಕ್ ಶೃಂಗ ಸಮ್ಮೇಳನ ರದ್ದಾಗಿರುವ ಬಗ್ಗೆ ಆ ದೇಶದ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಪ್ರತಿಪಕ್ಷಗಳು ಪ್ರಧಾನಿ ನವಾಝ್ ಶರೀಫ್ರನ್ನು ಬುಧವಾರ ತರಾಟೆಗೆ ತೆಗೆದುಕೊಂಡಿವೆ.
ಸಾರ್ಕ್ ಶೃಂಗ ಸಮ್ಮೇಳನವನ್ನು ಐದು ದೇಶಗಳು ಯಾಕೆ ಬಹಿಷ್ಕರಿಸಿವೆ ಎಂದು ಪ್ರಶ್ನಿಸಿರುವ ಪ್ರತಿಪಕ್ಷ ನಾಯಕ ಹಾಗೂ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ)ಯ ಹಿರಿಯ ನಾಯಕ ಖುರ್ಶೀದ್ ಶಾ, ಇಂಥ ಪರಿಸ್ಥಿತಿ ಬಾರದಂತೆ ಸರಕಾರ ನೋಡಿಕೊಳ್ಳಬೇಕಾಗಿತ್ತು ಎಂದಿದ್ದಾರೆ. ಪ್ರಧಾನಿ ಶರೀಫ್ ಈ ಸಂದರ್ಭದಲ್ಲಿ ಮಾತನಾಡಿ, ಭಯೋತ್ಪಾದಕ ಬುರ್ಹಾನ್ ವಾನಿಯನ್ನು ಹೊಗಳಿದರು ಹಾಗೂ ಭಾರತ ಯುದ್ಧವಿರಾಮ ಉಲ್ಲಂಘನೆಯಲ್ಲಿ ತೊಡಗಿದೆ ಎಂದು ಹೇಳಿದರು.
ಆದರೆ, ಪಾಕಿಸ್ತಾನದ ಲೋಪದೋಷಗಳನ್ನು ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕರು, ‘‘ನಮ್ಮ ವಿದೇಶ ನೀತಿ ಯಾಕೆ ಇಷ್ಟೊಂದು ದುರ್ಬಲವಾಗಿದೆ? ನಾವು ಯಾಕೆ ಏಕಾಂಗಿಯಾಗಿದ್ದೇವೆ?’’ ಎಂದು ಪ್ರಶ್ನಿಸಿದರು. ತೆಹ್ರೀಕೆ ಇನ್ಸಾಫ್ ಪಕ್ಷದ ಇಮ್ರಾನ್ ಖಾನ್ ಸಂಸತ್ತಿನ ವಿಶೇಷ ಅಧಿವೇಶನವನ್ನು ಬಹಿಷ್ಕರಿಸಿದ್ದರು.