ಭಾರತ ಜೊತೆಗಿನ ಜಂಟಿ ತೈಲಾಗಾರಕ್ಕೆ ಲಂಕಾ ನೌಕರರ ವಿರೋಧ
ಕೊಲಂಬೊ, ಎ. 23: ಪೂರ್ವದ ಬಂದರು ಪಟ್ಟಣ ಟ್ರಿಂಕೋಮಲಿಯಲ್ಲಿ ತೈಲ ಸಂಗ್ರಹಾಗಾರವೊಂದನ್ನು ಜಂಟಿಯಾಗಿ ನಡೆಸಲು ಭಾರತದೊಂದಿಗೆ ಶ್ರೀಲಂಕಾ ಸರಕಾರ ಒಪ್ಪಂದ ಮಾಡಿಕೊಳ್ಳಲು ಮುಂದಾಗಿರುವುದನ್ನು ಪ್ರತಿಭಟಿಸಿ ಆ ದೇಶದ ಸರಕಾರಿ ಒಡೆತನದ ತೈಲ ಕಂಪೆನಿಯೊಂದರ ಕೆಲಸಗಾರರು ಸೋಮವಾರದಿಂದ ಅನಿರ್ದಿಷ್ಟಾವಧಿಯ ಮುಷ್ಕರ ನಡೆಸಲಿದ್ದಾರೆ.
ದೇಶದ ಇಡೀ ಸಾರಿಗೆ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸುವ ಬೆದರಿಕೆಯನ್ನು ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಶನ್ (ಸಿಪಿಸಿ)ನ ಕಾರ್ಮಿಕ ಸಂಘ ಒಡ್ಡಿದೆ.
ಜಂಟಿ ಹೂಡಿಕೆ ಮಾಡಿ ಟ್ರಿಂಕೋಮಲಿ ಬಂದರನ್ನು ಅಭಿವೃದ್ಧಿಪಡಿಸುವ ಹಾಗೂ ಅಲ್ಲಿ ಪೆಟ್ರೋಲಿಯಂ ಶುದ್ಧೀಕರಣ ಘಟಕ ಹಾಗೂ ಇತರ ಉದ್ದಿಮೆಗಳನ್ನು ಆರಂಭಿಸುವ ಒಪ್ಪಂದವೊಂದಕ್ಕೆ ಶ್ರೀಲಂಕಾ ಮತ್ತು ಭಾರತ ಸಹಿ ಹಾಕುವುದೆಂದು ನಿರೀಕ್ಷಿಸಲಾಗಿದೆ.
ಟ್ರಿಂಕೋಮಲಿಯಲ್ಲಿರುವ 14 ತೈಲ ಸಂಗ್ರಹಾಗಾರಗಳ ನಿರ್ವಹಣಾ ಹಕ್ಕುಗಳನ್ನು ಭಾರತಕ್ಕೆ ನೀಡುವುದನ್ನು ತಾನು ವಿರೋಧಿಸುವುದಾಗಿ ಪೆಟ್ರೋಲಿಯಂ ಜಾಯಿಂಟ್ ಯೂನಿಯನ್ ಅಲಯನ್ಸ್ ಹೇಳಿದೆ. ಇದು ಭಾರತದ ತೈಲ ಕಂಪೆನಿ ಐಒಸಿಗೆ ಲಾಭ ಮಾಡಿಕೊಡಲಿದ್ದು, ಈಗಾಗಲೇ ಸಾಲದಲ್ಲಿರುವ ಸಿಪಿಸಿ ಇನ್ನಷ್ಟು ನಷ್ಟ ಅನುಭವಿಸಲಿದೆ ಎಂದು ಅದು ಅಭಿಪ್ರಾಯಪಟ್ಟಿದೆ.