ಸಿಕ್ಕಿಂನಲ್ಲಿ ಗಡಿ ಉಲ್ಲಂಘಿಸಿದ್ದು ಭಾರತೀಯ ಪಡೆ: ಚೀನಾದ ಆರೋಪ
ಭಾರತಕ್ಕೆ ಪ್ರತಿಭಟನೆ ಸಲ್ಲಿಕೆ
ಬೀಜಿಂಗ್, ಜೂ.27: ಸಿಕ್ಕಿಂ ಪ್ರದೇಶದಲ್ಲಿ ಭಾರತೀಯ ಪಡೆ ಗಡಿರೇಖೆಯನ್ನು ದಾಟಿದೆ ಎಂದು ಆರೋಪಿಸಿರುವ ಚೀನಾ, ತಕ್ಷಣ ಯೋಧರನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದೆ. ಅಲ್ಲದೆ, ಗಡಿ ವಿವಾದದ ಹಿನ್ನೆಲೆಯಲ್ಲಿ ಸುರಕ್ಷಾ ಕ್ರಮವಾಗಿ ಕೈಲಾಸ ಮಾನಸಸರೋವರ ಯಾತ್ರಾರ್ಥಿಗಳನ್ನು ನಾಥು ಲ ಕಣಿವೆ ಬಳಿ ತಡೆಹಿಡಿಯಲಾಗಿದೆ ಎಂದು ತಿಳಿಸಿದೆ.
ಈ ಬಗ್ಗೆ ಭಾರತ ಸರಕಾರಕ್ಕೆ ಹೊಸದಿಲ್ಲಿ ಹಾಗೂ ಬೀಜಿಂಗ್ನಲ್ಲಿ ರಾಜತಾಂತ್ರಿಕ ಮಟ್ಟದಲ್ಲಿ ಪ್ರತಿಭಟನೆ ಸಲ್ಲಿಸಲಾಗಿದೆ ಎಂದು ಚೀನಾದ ವಿದೇಶ ವ್ಯವಹಾರ ಇಲಾಖೆಯ ವಕ್ತಾರ ಲು ಕಾಂಗ್ ಹೇಳಿದ್ದಾರೆ.
ನಮ್ಮ ಪ್ರಾದೇಶಿಕ ಸಾರ್ವಭೌಮತೆಯನ್ನು ಎತ್ತಿಹಿಡಿಯುವ ನಮ್ಮ ನಿರ್ಧಾರ ಅಚಲವಾಗಿದೆ. ನಮ್ಮ ನಿಲುವಿಗೆ ಭಾರತ ಸಹಮತ ಸೂಚಿಸಿ, ಗಡಿ ದಾಟಿ ನಮ್ಮ ಭೂಪ್ರದೇಶಕ್ಕೆ ಬಂದಿರುವ ತನ್ನ ಸೈನಿಕರನ್ನು ತಕ್ಷಣ ಹಿಂದಕ್ಕೆ ಪಡೆಯಲಿದೆ ಎಂದು ನಿರೀಕ್ಷಿಸುತ್ತಿದ್ದೇವೆ ಎಂದವರು ಹೇಳಿದರು.
ಇತ್ತೀಚೆಗೆ ಚೀನಾ-ಭಾರತ ಗಡಿಯ ಸಿಕ್ಕಿಂ ಭಾಗದಲ್ಲಿ ಭಾರತೀಯ ಪಡೆ ಗಡಿದಾಟಿ ಚೀನಾದ ಭೂಪ್ರದೇಶವಾಗಿರುವ ಡೊಂಗ್ಲ್ಯಾಂಗ್ ಪ್ರವೇಶಿಸಿ ಅಲ್ಲಿ ಕಾರ್ಯನಿರತರಾಗಿದ್ದ ಚೀನಾದ ಗಡಿಭದ್ರತಾ ಪಡೆಯ ದೈನಂದಿನ ಚಟುವಟಿಕೆಗೆ ಅಡ್ಡಿ ತಂದಿತ್ತು . ಚೀನಾ ಪಡೆ ಇದಕ್ಕೆ ಸೂಕ್ತವಾಗಿ ಪ್ರತಿಕ್ರಿಯಿಸಿದೆ ಎಂದು ಅವರು ಸೋಮವಾರ ರಾತ್ರಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚೀನಾಕ್ಕೆ ಸೇರಿದ ಡೊಂಗ್ಲ್ಯಾಂಗ್ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕೆ ತಡೆ ಒಡ್ಡುವ ಸಲುವಾಗಿ ಭಾರತೀಯ ಪಡೆ ಗಡಿ ದಾಟಿದೆ ಎಂದು ಚೀನಾದ ರಕ್ಷಣಾ ಸಚಿವಾಲಯ ಆರೋಪಿಸಿದ ಮರುದಿನ ಲು ಕಾಂಗ್ ಹೇಳಿಕೆ ನೀಡಿದ್ದಾರೆ.
ಸಿಕ್ಕಿಂ ಭಾಗದಲ್ಲಿರುವ ಚೀನಾ-ಭಾರತ ಗಡಿಭಾಗದ ಬಗ್ಗೆ ಒಪ್ಪಂದದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಈ ಬಗ್ಗೆ ತನ್ನ ಆಕ್ಷೇಪವಿಲ್ಲ ಎಂದು ಭಾರತ ಸರಕಾರ ಹೇಳುತ್ತಾ ಬಂದಿದೆ. ಗಡಿಭಾಗದ ಒಪ್ಪಂದವನ್ನು ಮತ್ತು ಚೀನಾದ ಪ್ರಾದೇಶಿಕ ಸಾರ್ವಭೌಮತೆಯನ್ನು ಭಾರತ ಗೌರವಿಸಬೇಕು. ಈ ಮೂಲಕ ಚೀನಾ-ಭಾರತ ಗಡಿಭಾಗದಲ್ಲಿ ಶಾಂತಿ ಮತ್ತು ಸ್ಥಿರತೆಯ ಸ್ಥಿತಿ ನೆಲೆಸಲು ಸಹಕರಿಸಬೇಕು ಎಂದು ಭಾರತವನ್ನು ಆಗ್ರಹಿಸುವುದಾಗಿ ಚೀನಾದ ವಿದೇಶ ವ್ಯವಹಾರ ಇಲಾಖೆಯ ವಕ್ತಾರ ರೆನ್ ಗುಕಿಯಾಂಗ್ ಸೋಮವಾರ ಹೇಳಿಕೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಮತ್ತು ಸುರಕ್ಷತೆಯ ಕಾರಣದಿಂದ ನಾಥು ಲ ಕಣಿವೆಯ ಮೂಲಕ ಮಾನಸ ಸರೋವರದತ್ತ ಸಾಗಲು ಭಾರತದ ಯಾತ್ರಾರ್ಥಿಗಳಿಗೆ ತಡೆ ಒಡ್ಡಲಾಯಿತು. ಈ ಬಗ್ಗೆ ರಾಜತಾಂತ್ರಿಕ ಮಾರ್ಗದ ಮೂಲಕ ಭಾರತಕ್ಕೆ ಮಾಹಿತಿ ನೀಡಲಾಗಿದೆ . ಉಭಯ ದೇಶಗಳ ವಿದೇಶ ಸಚಿವರು ಈ ವಿಷಯದ ಕುರಿತು ಮಾತುಕತೆ ನಡೆಸಿದ್ದಾರೆ ಎಂದವರು ಹೇಳಿದ್ದಾರೆ. ಸಮುದ್ರ ಮಟ್ಟಕ್ಕಿಂತ 4,545 ಮೀಟರ್ ಎತ್ತರದಲ್ಲಿರುವ ನಾಥು ಲ ಕಣಿವೆ ಪ್ರದೇಶ ಸ್ವಾಯತ್ತ ಟಿಬೆಟ್ ಪ್ರದೇಶ ಮತ್ತು ಸಿಕ್ಕಿಂನ ಮಧ್ಯೆ ಇದೆ.