ಇದು 1962ರ ಚೀನಾ ಅಲ್ಲ
ಜೇಟ್ಲಿಗೆ ಚೀನಾ ಮಾರುತ್ತರ
ಬೀಜಿಂಗ್, ಜು. 3: ಸಿಕ್ಕಿಂ ಗಡಿಯಲ್ಲಿರುವ ಡೋಕ್ಲಂ ಪ್ರದೇಶಕ್ಕೆ ‘ಅಕ್ರಮ ಪ್ರವೇಶ’ ಮಾಡಿರುವುದನ್ನು ಮರೆಮಾಚಲು ಭಾರತ ಭೂತಾನನ್ನು ಗುರಾಣಿಯಾಗಿ ಬಳಸಿಕೊಳ್ಳುತ್ತಿದೆ ಎಂದು ಚೀನಾ ಆರೋಪಿಸಿದೆ.
ಕಳೆದ ವಾರ ರಕ್ಷಣಾ ಸಚಿವ ಅರುಣ್ ಜೇಟ್ಲಿ ನೀಡಿದ ಹೇಳಿಕೆಗೆ ಚೀನಾ ವಿದೇಶ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.
ಇಂದಿನ ಭಾರತವು 1962ರ ಭಾರತಕ್ಕಿಂತ ತುಂಬಾ ಭಿನ್ನವಾಗಿದೆ ಎಂದು ಜೇಟ್ಲಿ ಹೇಳಿದ್ದರು. 1962ರಲ್ಲಿ ಭಾರತ ಮತ್ತು ಚೀನಾಗಳ ನಡುವೆ ಅರುಣಾಚಲಪ್ರದೇಶಕ್ಕೆ ಸಂಬಂಧಿಸಿ ಯುದ್ದ ನಡೆದಿತ್ತು.
‘‘1962ರ ಭಾರತಕ್ಕಿಂತ 2017ರ ಭಾರತ ತುಂಬಾ ಭಿನ್ನವಾಗಿದೆ ಎಂದು ಅವರು ಹೇಳಿರುವುದು ಸರಿಯಾಗಿದೆ. ಅದೇ ರೀತಿ ಚೀನಾವೂ ಭಿನ್ನವಾಗಿದೆ’’ ಎಂದು ಅವರು ಹೇಳಿದರು.
ಸಿಕ್ಕಿಂನಲ್ಲಿ ತನ್ನ ಗಡಿಯೊಳಗೆ ಪ್ರವೇಶಿಸಿರುವ ಸೈನಿಕರನ್ನು ಭಾರತ ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಅವರು ಪುನರುಚ್ಚರಿಸಿದರು.
‘‘ತನ್ನ ಪ್ರಾದೇಶಿಕ ಸಾರ್ವಭೌಮತ್ವವನ್ನು ರಕ್ಷಿಸಲು ಚೀನಾವು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ’’ ಎಂದು ಅವರು ಎಚ್ಚರಿಸಿದರು.