ಕರ್ನಾಟಕ ದೀಪಿಕಾ ಪಡುಕೋಣೆ ಪರವಾಗಿದೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರು, ನ.20: ಪದ್ಮಾವತಿ ಸಿನೆಮಾದಲ್ಲಿ ಅಭಿನಯಿಸಿರುವುದಕ್ಕಾಗಿ ಕನ್ನಡ ಮೂಲದ ನಟಿ ದೀಪಿಕಾ ಪಡುಕೋಣೆಗೆ ಬಿಜೆಪಿ ನಾಯಕರು ಬೆದರಿಕೆ ಹಾಕುತ್ತಿರುವುದು ಸಂಸ್ಕೃತಿಯಲ್ಲ. ಇಡೀ ಕರ್ನಾಟಕದ ಜನತೆ ನಟಿ ದೀಪಿಕಾ ಪಡುಕೋಣೆ ಪರವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಪದ್ಮಾವತಿ ಸಿನೆಮಾದ ನಟಿ ದೀಪಿಕಾ ಪಡುಕೋಣೆ ಹಾಗೂ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯ ಶಿರಚ್ಛೇದನಕ್ಕೆ ಹತ್ತು ಕೋಟಿ ಬಹುಮಾನ ಘೋಷಿಸಿರುವ ಹರಿಯಾಣದ ಬಿಜೆಪಿ ನಾಯಕ ಪ್ರಭೃತಿ ಸೂರಜ್ ಪಾಲ್ ಹೇಳಿಕೆಗೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದಾರೆ.
ಕನ್ನಡ ಮೂಲದ ದೀಪಿಕಾ ಪಡುಕೋಣೆ ಅಂತಾರಾಷ್ಟ್ರೀಯ ಮಟ್ಟದ ನಟಿಯಾಗಿದ್ದಾರೆ. ಬಿಜೆಪಿ ನಾಯಕರು ತಮ್ಮ ಸ್ವಾರ್ಥಕ್ಕಾಗಿ ಅವರಿಗೆ ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ ಅವರಿಗೆ ಸೂಕ್ತ ಭದ್ರತೆ ಒದಗಿಸಲಾಗುವುದು ಎಂದು ಅವರು ಹೇಳಿದ್ದಾರೆ.
ನಟಿ ದೀಪಿಕಾ ಪಡುಕೋಣೆಗೆ ಬೆದರಿಕೆ ಹಾಕಿರುವವರ ವಿರುದ್ಧ ಸೂಕ್ತ ಕ್ರಮ ವಹಿಸುವಂತೆ ಹರಿಯಾಣದ ಮುಖ್ಯಮಂತ್ರಿ ಜೊತೆ ಮಾತನಾಡಿದ್ದೇನೆ. ಕರ್ನಾಟಕದಲ್ಲಿ ಕಲೆ, ಸಾಹಿತ್ಯದ ಬೆಳವಣಿಗೆಗೆ ಪೂರಕವಾದ ವಾತಾವರಣವಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಜನತೆ ಪದ್ಮಾವತಿ ಸಿನೆಮಾದ ಪರವಾಗಿದ್ದಾರೆ ಎಂದು ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.