ಸರಕಾರಕ್ಕೆ ಮನವಿ ಸಲ್ಲಿಸಲು ಅರ್ಜಿದಾರರಿಗೆ ಹೈಕೋರ್ಟ್ ಸೂಚನೆ
ಮೈಸೂರಿನ ಅರಮನೆಗೆ ಸ್ವರ್ಣ ಲೇಪನ ಕಾರ್ಯ ಮುಂದುವರಿಸುವ ವಿಚಾರ
ಬೆಂಗಳೂರು, ನ.22: ಖ್ಯಾತ ಕಲಾವಿದ ಗಂಜೀಫ ರಘುಪತಿ ಭಟ್ ಅವರಿಂದ ಮೈಸೂರಿನ ಅರಮನೆ ದರ್ಬಾರ್ ಹಾಲ್ನ ಸ್ತಂಭಗಳ ಸ್ವರ್ಣ ಲೇಪನ ಕಾರ್ಯ ಮುಂದುವರಿಸುವ ವಿಚಾರ ಸಂಬಂಧ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸುವಂತೆ ಅರ್ಜಿದಾರ ಬಸವರಾಜ ಅರಸ್ಗೆ ಹೈಕೋರ್ಟ್ ಬುಧವಾರ ಸೂಚಿಸಿದೆ.
ಈ ಸಂಬಂಧ ಬಸವರಾಜ ಅರಸ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ಕುರಿತು ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸುವಂತೆ ಸೂಚಿಸಿ ಅರ್ಜಿ ಇತ್ಯರ್ಥಪಡಿಸಿತು.
ಮೈಸೂರು ಅರಮನೆ ದರ್ಬಾರ್ ಹಾಲ್ನಲ್ಲಿರುವ ಕೆಲ ಸ್ತಂಭಗಳಿಗೆ ಸ್ವರ್ಣ ಲೇಪನದ ಗುತ್ತಿಗೆಯನ್ನು ಖ್ಯಾತ ಕಲಾವಿದ ಗಂಜೀಫ ರಘುಪತಿ ಭಟ್ ಪಡೆದು 2013ರಲ್ಲಿ ಪೂರ್ಣಗೊಳಿಸಿದ್ದರು. ತದನಂತರ ಉಳಿದ 72 ಸ್ತಂಭಗಳಿಗೆ ಸ್ವರ್ಣ ಲೇಪನ ಮಾಡಿಸಲು ಸರಕಾರ ಸಮ್ಮತಿ ಸೂಚಿಸಿ ಹಣ ಬಿಡುಗಡೆಗೂ ತೀರ್ಮಾನಿಸಿತ್ತು.
ಈ ಮಧ್ಯೆ ಜೀವರಾಜು ಎಂಬವರು ಸ್ವರ್ಣ ಲೇಪನ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ನೀಡಿದ್ದ ಸುಳ್ಳು ದೂರು ಆಧರಿಸಿ ಲೋಕಾಯುಕ್ತ ಪೊಲೀಸರು ತಮ್ಮ ವಿರುದ್ಧ ಎಫ್ಐಆರ್ ದಾಖಲಿಸಿದ್ದರಿಂದ ರಘುಪತಿ ಭಟ್ ಮನನೊಂದು ಸ್ವರ್ಣ ಲೇಪನ ಕಾರ್ಯ ಮುಂದುವರಿಸಲಿಲ್ಲ. ಇದರಿಂದ ಸದ್ಯ ಸ್ವರ್ಣ ಲೇಪನ ಕಾರ್ಯ ಸ್ಥಗಿತಗೊಂಡಿದ್ದು, ಆ ಕಾರ್ಯವನ್ನು ರಘುಪತಿ ಭಟ್ರಿಂದಲೇ ಮುಂದುವರಿಸಲು ಸೂಕ್ತ ಕ್ರಮ ಜರಗಿಸುವಂತೆ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಹೈಕೋರ್ಟ್ಗೆ ಕೋರಿದ್ದರು.