ಕೊಡಗು ಡಿಸಿ ವಿರುದ್ಧ ಎಫ್ಐಆರ್ ದಾಖಲಿಸಲು ಹೈಕೋರ್ಟ್ ಆದೇಶ
ಸ್ಥಿರಾಸ್ತಿ ವಿವಾದಕ್ಕೆ ವ್ಯತಿರಿಕ್ತ ಆದೇಶ ನೀಡಿದ ಆರೋಪ
ಬೆಂಗಳೂರು, ನ.23: ಸ್ಥಿರಾಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಒಂದೇ ದಿನ ಅರ್ಜಿದಾರ ಹಾಗೂ ಪ್ರತಿವಾದಿಗೆ ಅನುಕೂಲವಾಗುವಂತಹ ವ್ಯತಿರಿಕ್ತ ಆದೇಶ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲಾಧಿಕಾರಿ ರಿಚರ್ಡ್ ವಿನ್ಸಂಟ್ ಡಿಸೋಜಾ ವಿರುದ್ಧ ಎಫ್ಐಆರ್ ದಾಖಲಿಸಲು ಹೈಕೋರ್ಟ್ ಆದೇಶಿಸಿದೆ.
ಈ ಕುರಿತಂತೆ ಬಿ.ಆರ್.ಮೊಹಮ್ಮದ್ ಶೋಯೆಬ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿ ಜಿಲ್ಲಾಧಿಕಾರಿ ಕ್ರಮವನ್ನು ತರಾಟೆಗೆ ತೆಗೆದುಕೊಂಡಿತು.
ಬಹುಶಃ ಜಿಲ್ಲಾಧಿಕಾರಿಯನ್ನು ಇಬ್ಬರೂ ಓಲೈಸಿರಬೇಕು. ಅದಕ್ಕೆ ಈ ರೀತಿ ಇಬ್ಬರಿಗೂ ಅನುಕೂಲವಾಗುವಂತಹ ಆದೇಶ ನೀಡಿದ್ದಾರೆ ಎಂದು ನ್ಯಾಯಮೂರ್ತಿಗಳು ಮೌಖಿಕವಾಗಿ ಕುಟಕಿದರು.
ರಿಜಿಸ್ಟ್ರಾರ್ ವಿಜಿಲೆನ್ಸ್ ಅಥವಾ ನ್ಯಾಯಾಂಗ ಅಧಿಕಾರಿಯು ಜಿಲ್ಲಾಧಿಕಾರಿ ವಿರುದ್ಧ ಎಫ್ಐಆರ್ ದಾಖಲಿಸಬೇಕು. ಈ ಕುರಿತಂತೆ ಸರಕಾರದ ಮುಖ್ಯ ಕಾರ್ಯದರ್ಶಿ ಇಲಾಖಾ ವಿಚಾರಣೆ ನಡೆಸಬೇಕು ಮತ್ತು ಈ ಕುರಿತಂತೆ ಮುಂದಿನ ವಿಚಾರಣೆ ವೇಳೆಗೆ ವರದಿ ಒಪ್ಪಿಸಬೇಕು ಎಂದು ಆದೇಶಿಸಲಾಗಿದೆ.
ಪ್ರತಿವಾದಿಗಳಾದ ಕೊಡಗು ಜಿಲ್ಲಾಧಿಕಾರಿ, ವಿರಾಜಪೇಟೆ ಪಟ್ಟಣ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಬಿ.ಆರ್.ಖಲೀಲ್ ಅಹ್ಮದ್ ಅವರಿಗೆ ನೋಟಿಸ್ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿದೆ.
ಈ ವಿಚಾರಣೆಯನ್ನು ಡಿಸೆಂಬರ್ 14ಕ್ಕೆ ಮುಂದೂಡಲಾಗಿದೆ.
ಅರ್ಜಿದಾರರ ಪರ ಶುಕೂರ್ ಕಮಲ್ ವಾದ ಮಂಡಿಸಿದರು.