ಮನೆಗೆ ಮರಳಿದ ಪತ್ರಕರ್ತ ರವಿಬೆಳಗೆರೆ
ಬೆಂಗಳೂರು,ಡಿ.24: ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಪ್ರಕರಣದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿ ಜಾಮೀನು ಪಡೆದು ಚಿಕಿತ್ಸೆ ಪಡೆಯುತ್ತಿದ್ದ ಪತ್ರಕರ್ತ ರವಿ ಬೆಳಗೆರೆ ಇಂದು ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.
ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪಿತ್ತಕೋಶದ ಸಮಸ್ಯೆಯಿಂದ ಚಿಕಿತ್ಸೆ ಪಡೆಯುತ್ತಿದ್ದ ರವಿ ಬೆಳಗೆರೆ ರವಿವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆ ಸೇರಿದ್ದಾರೆ. ಡಿ.22ರಂದು ರವಿ ಬೆಳೆಗೆರೆಗೆ ಸೆಷನ್ಸ್ ನ್ಯಾಯಾಲಯ ಪೂರ್ಣ ಪ್ರಮಾಣದಲ್ಲಿ ಜಾಮೀನು ನೀಡಿತ್ತು. ಚಿಕಿತ್ಸೆ ಮುಗಿದ ಹಿನ್ನೆಲೆಯಲ್ಲಿ ಮನೆಗೆ ಹಿಂದುರಿಗಿದ್ದಾರೆ.
ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಫೇಸ್ ಬುಕ್ನಲ್ಲಿ ಪೋಸ್ಟ್ ಮಾಡಿರುವ ರವಿ ಬೆಳಗೆರೆ ಹ್ಯಾಪ್ಪಿ ಬರ್ಡ್ ಎಂದು ಸ್ಟೇಟಸ್ ಹಾಗೂ ಪೋಟೋ ಹಾಕಿದ್ದಾರೆ. ಅವರ ಫೋಟೋಗೆ ಸಾವಿರಾರು ಬೆಂಬಲಿಗರು ಸ್ಪಂದಿಸಿದ್ದು ಈ ಕೇಸಿನಲ್ಲಿ ಆರೋಪ ಮುಕ್ತರಾಗುವಂತೆ ಆಶಿಸಿದ್ದಾರೆ. ಬಂಧನಕ್ಕೊಳಗಾದ ನಂತರ ಎರಡು ರಾತ್ರಿಗಳನ್ನು ಪರಪ್ಪನ ಅಗ್ರಹಾರದಲ್ಲಿ ಕಳೆದಿದ್ದ ರವಿಬೆಳಗೆರೆ, ಆ ನಂತರ ಜಯದೇವ ಆಸ್ಪತ್ರೆ ಮತ್ತು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.