ಕರ್ನಾಟಕ: ನೂತನ ವರ್ಷದಲ್ಲಿ ಮೈನಡುಗಿಸಲಿದೆ ‘ಚಳಿ’
ಬೆಂಗಳೂರು, ಡಿ. 31: ರಾಜ್ಯದಲ್ಲಿ ಹಿಂದೆಂದಿಗಿಂತಲೂ ಕನಿಷ್ಟ ತಾಪಮಾನ ದಾಖಲಾಗಿದ್ದು, 1.5 ಡಿಗ್ರಿ ಸೆಲ್ಸಿಯಸ್ನಿಂದ 5 ಡಿಗ್ರಿ ಸೆಲ್ಸಿಯಸ್ಗೆ ತಾಪಮಾನ ವ್ಯತ್ಯಯವಾಗಿರುವುದರಿಂದ ರಾಜ್ಯಾಂದ್ಯಂತ ಚಳಿಯ ಪ್ರಮಾಣ ಅಧಿಕವಾಗಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.
ಉತ್ತರದಿಂದ ಶೀತಗಾಳಿ ಬೀಸುವ ಪರಿಣಾಮ ರಾಜ್ಯಾಂದ್ಯಂತ ಕನಿಷ್ಟ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗಿರುವುದರಿಂದ ಮಕರ ಸಂಕ್ರಾಂತಿವರೆಗೂ ಚಳಿಯ ಪ್ರಮಾಣ ತೀವ್ರವಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬೀದರ್, ವಿಜಯಪುರ, ಕಲಬುರಗಿ, ಕೊಡುಗು, ಕೊಪ್ಪಳ, ಚಿಕ್ಕಮಗಳೂರು, ಬಾಗಲಕೋಟೆ ಜಿಲ್ಲೆಗಳಲ್ಲಿ ಕನಿಷ್ಟ ತಾಪಮಾನ ಸರಾಸರಿ 7ರಿಂದ 8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉಳಿದ ಕೆಲ ಜಿಲ್ಲೆಗಳಲ್ಲಿ 10ರಿಂದ 13ಡಿಗ್ರಿ ಸೆಲ್ಸಿಯಸ್ ಕನಿಷ್ಟ ತಾಪಮಾನ ದಾಖಲಾಗಿದೆ. ನೂತನವರ್ಷದ ಜನವರಿ ವೇಳೆಗೆ ಮತ್ತಷ್ಟು ತಾಪಮಾನ ಇಳಿಕೆಯಾಗುವ ಸಂಭವವಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಹಗಲಿನಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಲಿದ್ದು, ಬೆಳಗಿನ ಜಾವ ಮತ್ತು ಸಂಜೆಯ ವೇಳೆಯಲ್ಲಿ ಮಂಜು ಕವಿದ ವಾತಾವರಣವಿರಲಿದ್ದು, ಈ ಸಂದರ್ಭದಲ್ಲಿ ಕನಿಷ್ಟ ತಾಪಮಾನದಲ್ಲಿ ಏರಿಕೆ ಕಂಡುಬರುತ್ತದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಲ್ಲೂ ಚಳಿ ಅಧಿಕವಾಗಲಿದೆ ಎಂದು ಶ್ರೀನಿವಾಸ್ ರೆಡ್ಡಿ ಹೇಳಿದ್ದಾರೆ.