ಯುವತಿ ಆತ್ಮಹತ್ಯೆ ಪ್ರಕರಣಕ್ಕೆ ತಿರುವು
ಬೆಂಗಳೂರು, ಜ.18: ಪೊಲೀಸರ ದುರ್ವರ್ತನೆಗೆ ಮನನೊಂದು ಯುವತಿ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಳು ಎನ್ನಲಾಗಿದ್ದ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ವೈಟ್ ಫೀಲ್ಡ್ ಠಾಣೆಯ ಪಿಎಸ್ಐ ಸೋಮಶೇಖರ್, ಮುಖ್ಯ ಪೇದೆ ರೋಷನ್ ಅಲಿಖಾನ್ ವಿರುದ್ಧ ಯುವತಿ ಶಿಲ್ಪಾಹಾಗೂ ಆತನ ಗೆಳೆಯ ಷಡ್ಯಂತ್ರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಕೆಲ ದಿನಗಳ ಹಿಂದೆ ಮಹೇಂದ್ರ ಎಂಬಾತ ಆಟೋ ಚಾಲಕನಿಗೆೆ ಹಲ್ಲೆ ಮಾಡಿದ್ದ ಹಿನ್ನೆಲೆಯಲ್ಲಿ ಮಹೇಂದ್ರನನ್ನು ಠಾಣೆಗೆ ಕರೆಸಿ ಪಿಎಸ್ಐ ಸೋಮಶೇಖರ್ ಹಾಗೂ ಮುಖ್ಯ ಪೇದೆ ರೋಷನ್ ಅಲಿಖಾನ್ ಎಚ್ಚರಿಕೆ ನೀಡಿದ್ದರು ಎಂದು ತಿಳಿದು ಬಂದಿದೆ.
ಈ ಸಂಬಂದ ಮಹೇಂದ್ರನ ಗೆಳತಿ ಶಿಲ್ಪಾಆತ್ಮಹತ್ಯೆ ಯತ್ನ ನಾಟಕವಾಡಿ ಪೊಲೀಸರ ವಿರುದ್ಧ ಆರೋಪ ಮಾಡುತ್ತಿದ್ದಾಳೆ ಎನ್ನಲಾಗಿದೆ.
ಘಟನೆ ವಿವರ: ಮೂರು ದಿನಗಳ ಹಿಂದೆ ಯುವತಿ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆ ಕಾಡುಗೋಡಿಯ ಪಟಾಲಮ್ಮ ಬಡಾವಣೆಯಲ್ಲಿ ನಡೆದಿತ್ತು. ದೇವಾಲಯಕ್ಕೆ ತೆರಳುತ್ತಿದ್ದ ಶಿಲ್ಪಳಿಗೆ ಬೈಕ್ ವೀಲಿಂಗ್ ಮಾಡುತ್ತಾ ಬಂದ ಯುವಕರ ತಂಡ ಚುಡಾಯಿಸಿದ್ದಾರೆ. ಹೀಗಾಗಿ, ವೈಟ್ ಫೀಲ್ಡ್ ಪೋಲಿಸ್ ಠಾಣೆಗೆ ದೂರು ನೀಡಲು ಹೋದಾಗ ಠಾಣೆಯ ಪಿಎಸ್ಐ ಸೋಮಶೇಖರ್, ಮುಖ್ಯ ಪೇದೆ ರೋಷನ್ ಅಲಿಖಾನ್ ಐದು ಗಂಟೆಗಳ ಕಾಲ ಕಾಯಿಸಿ ಅವಾಚ್ಯ ಪದಗಳಿಂದ ನಿಂದಿಸಿ, ಜಾತಿನಿಂದನೆ ಮಾಡಿ, ದೂರು ಸ್ವೀಕರಿಸಿದ್ದಾರೆ ಎಂದು ಆರೋಪಿಸಿ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಳು.