ಲಾರಿಗಳ ನಡುವೆ ಢಿಕ್ಕಿ: ಕೂಲಿ ಕಾರ್ಮಿಕ ಮೃತ್ಯು
ಬೆಂಗಳೂರು, ಜ. 22: ಏಕಾಏಕಿ ನಿಂತ ಲಾರಿಯನ್ನು ತಳ್ಳುತ್ತಿದ್ದ ಇಬ್ಬರು ಕೂಲಿ ಕಾರ್ಮಿಕರಿಗೆ ಹಿಂದಿನಿಂದ ಬಂದ ಲಾರಿ ಢಿಕ್ಕಿ ಹೊಡೆದು, ಓರ್ವ ಮೃತಪಟ್ಟರೆ, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬನ್ನೇರುಘಟ್ಟ ರಸ್ತೆಯಲ್ಲಿ ರವಿವಾರ ತಡರಾತ್ರಿ ನಡೆದಿದೆ.
ಕೂಡ್ಲು ಗೇಟ್ನ ಶಿವಣ್ಣ (37) ಮೃತಪಟ್ಟವರು. ಗಾಯಗೊಂಡಿರುವ ನಾಗರಾಜ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ.
ಕೂಡ್ಲು ಗೇಟ್ನಿಂದ ಪೀಠೋಪಕರಣಗಳನ್ನು ತುಂಬಿಕೊಂಡು ಬನ್ನೇರುಘಟ್ಟ ರಸ್ತೆಯಲ್ಲಿ ರಾತ್ರಿ 11.30ರ ವೇಳೆ ಬರುತ್ತಿದ್ದ ಲಾರಿ ಟಿ ಜಾನ್ ಕಾಲೇಜಿನ ಬಳಿ ಏಕಾಏಕಿ ನಿಂತಿದೆ. ಲಾರಿಯನ್ನು ಹಿಂದಿನಿಂದ ತಳ್ಳಲು ಶಿವಣ್ಣ ಹಾಗೂ ನಾಗರಾಜ್ ಹೋಗಿದ್ದು, ಈ ವೇಳೆ ಹಿಂದಿನಿಂದ ಬಂದ ಲಾರಿ ಕತ್ತಲಲ್ಲಿ ಸರಿಯಾಗಿ ಕಾಣದೆ ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ಅಪಘಾತವೆಸಗಿದ ಲಾರಿ ಚಾಲಕನನ್ನು ಬಂಧಿಸಿರುವ ಹುಳಿಮಾವು ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Next Story