ಜಾಗತಿಕ ಲಿಂಗಾಯತ ಮಹಾಸಭಾ ಅಧಿಕೃತವಾಗಿ ಅಸ್ತಿತ್ವಕ್ಕೆ: ಪ್ರಥಮ ರಾಷ್ಟ್ರೀಯ ಅಧ್ಯಕ್ಷರಾಗಿ ಬಸವರಾಜ ಹೊರಟ್ಟಿ ಆಯ್ಕೆ
ಬೆಂಗಳೂರು, ಜ.23: ಜಾಗತಿಕ ಲಿಂಗಾಯತ ಮಹಾಸಭಾ ಮಂಗಳವಾರ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದ್ದು, ಇದರ ಪ್ರಥಮ ರಾಷ್ಟ್ರೀಯ ಅಧ್ಯಕ್ಷರಾಗಿ ಬಸವರಾಜ ಹೊರಟ್ಟಿ ಹಾಗೂ ರಾಜ್ಯಾಧ್ಯಕ್ಷರಾಗಿ ಡಾ.ಶರಣ ಪ್ರಕಾಶ ಪಾಟೀಲ ಅವರ ಹೆಸರನ್ನು ಘೋಷಿಸಲಾಯಿತು.
ಮಂಗಳವಾರ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಲಿಂಗಾಯತ ಸಮಾಜದ ಸ್ವಾಮೀಜಿಗಳು, ಮುಖಂಡರ ಸಭೆಯಲ್ಲಿ ಈ ಮಹಾಸಭಾ ಅಸ್ತಿತ್ವಕ್ಕೆ ತರಲಾಯಿತು. ಈ ಮೊದಲು ವಿಶ್ವ ಲಿಂಗಾಯತ ಪರಿಷತ್ ಸ್ಥಾಪಿಸುವುದಾಗಿ ಲಿಂಗಾಯತ ಮುಖಂಡರು ಹೇಳಿದ್ದರು. ಆದರೆ, ಈಗಾಗಲೇ ಹಲವು ಜಿಲ್ಲೆಗಳಲ್ಲಿ ಪರಿಷತ್ ಹೆಸರಿನಲ್ಲಿ ಸಂಘಟನೆ ಇರುವುದರಿಂದ ಜಾಗತಿಕ ಲಿಂಗಾಯತ ಮಹಾಸಭಾ ಎಂದು ಹೆಸರಿಡಲು ಸಭೆ ನಿರ್ಧರಿಸಿತು.
ಸಭೆಯ ಬಳಿಕ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾದ ನೂತನ ಅಧ್ಯಕ್ಷ ಬಸವರಾಜ ಹೊರಟ್ಟಿ, ವೀರಶೈವ ಮಹಾಸಭಾದ ಜತೆ ನಾವು ನಡೆಸಿದ ಸಂಧಾನ ಪ್ರಕ್ರಿಯೆಗಳು ವಿಫಲವಾದ ಹಿನ್ನೆಲೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಸ್ಥಾಪಿಸುವ ಅನಿವಾರ್ಯತೆ ಸೃಷ್ಟಿಯಾಯಿತು ಎಂದು ಸ್ಪಷ್ಟಪಡಿಸಿದರು.
ಬಸವ ಧರ್ಮ ಪ್ರಚಾರ, ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ, ಈ ಧರ್ಮದ ಬಡವರಿಗೆ ಸವಲತ್ತು ಕಲ್ಪಿಸುವುದು ಜಾಗತಿಕ ಲಿಂಗಾಯತ ಮಹಾಸಭಾದ ಧ್ಯೇಯವಾಗಿದೆ. ನಾವು ಈ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ. ಸಭಾದ ಬೈಲಾ ಪ್ರಕಾರವೇ ನಡೆಯುತ್ತೇವೆ ಎಂದು ಸ್ಪಷ್ಟಪಡಿಸಿದರು.
ಸಚಿವ ಎಂ.ಬಿ.ಪಾಟೀಲ ಮಾತನಾಡಿ, ವೀರಶೈವ ಮಹಾಸಭಾದ ಜತೆ ಮಾತನಾಡಿ ವಿಫಲರಾದಾಗ ಕಟ್ಟಕಡೆಯ ಅಸ್ತ್ರವಾಗಿ ಜಾಗತಿಕ ಲಿಂಗಾಯತ ಮಹಾಸಭಾ ಅಸ್ತಿತ್ವಕ್ಕೆ ತರಬೇಕಾಗಿ ಬಂತು. ಇದಕ್ಕೆ ಬಸವರಾಜ ಹೊರಟ್ಟಿಯವರು ಅಧ್ಯಕ್ಷರಾಗಿದ್ದಾರೆ. ಎ.ಬಿ.ಮಾಲಕರೆಡ್ಡಿ, ಬಸವರಾಜ ರಾಯರೆಡ್ಡಿ, ಪ್ರಕಾಶ್ ಹುಕ್ಕೇರಿ ಸೇರಿದಂತೆ ಅನೇಕರು ಉಪಾಧ್ಯಕ್ಷರಿದ್ದಾರೆ. ಡಾ.ಶರಣಪ್ರಕಾಶ ಪಾಟೀಲ ರಾಜ್ಯಾಧ್ಯಕ್ಷರಾಗಿದ್ದಾರೆ. ಲಿಂಗಾಯತ ಎಲ್ಲಾ ಉಪಜಾತಿಗಳ ನಾಯಕರಿಗೂ ಮಹಾಸಭಾದ ಪದಾಧಿಕಾರಿ ಹುದ್ದೆಗಳಲ್ಲಿ ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ಗದಗ ಶ್ರೀ ತೋಂಟದ ಸಿದ್ಧಲಿಂಗ ಸ್ವಾಮಿಗಳು ಮಾತನಾಡಿ, ಜಾತಿ ಪ್ರಮಾಣ ಪತ್ರ ಕೇಳಿದರೆ ಈಗಲೂ ವೀರಶೈವ ಲಿಂಗಾಯತ ಎಂದೇ ಕೊಡುತ್ತಾರೆ. ಇದನ್ನು ಸರಿಪಡಿಸುವತ್ತ ಮುಖಂಡರು ಗಮನಹರಿಸಬೇಕು ಎಂದು ಸಲಹೆ ನೀಡಿದರು.
ವೀರಶೈವರು ಲಿಂಗಾಯತರನ್ನು ಹೈಜಾಕ್ ಮಾಡುತ್ತಲೇ ಬಂದರು. ಲಿಂಗಾಯತ ವೇಷ ಹಾಕಿಕೊಂಡು ಗೊಂದಲ ಸೃಷ್ಟಿ ಮಾಡಿದರು ಎಂದರು. ಸಚಿವ ವಿನಯ ಕುಲಕರ್ಣಿ, ಜಾಗತಿಕ ಲಿಂಗಾಯತ ಮಹಾಸಭಾದ ನೂತನ ರಾಜ್ಯಾಧ್ಯಕ್ಷ ಡಾ.ಶರಣ ಪ್ರಕಾಶ ಪಾಟೀಲ, ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ. ಜಾಮದಾರ್, ಡಾ.ಜಯಣ್ಣ ಮತ್ತಿತರರು ಉಪಸ್ಥಿತರಿದ್ದರು.
ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾಗಿ ಬಸವರಾಜ ಹೊರಟ್ಟಿ ನೇಮಕಗೊಂಡಿದ್ದಾರೆ. ಎಸ್.ಎಂ. ಜಾಮದಾರ್ (ಪ್ರಧಾನ ಕಾರ್ಯದರ್ಶಿ), ಎಂ.ಬಿ.ಪಾಟೀಲ(ಕಾರ್ಯಾಧ್ಯಕ್ಷ), ಎ.ಬಿ.ಮಾಲಕರೆಡ್ಡಿ, ಶಂಕರ ಬಿದರಿ, ಅರವಿಂದ ಜತ್ತಿ, ಬಸವರಾಜ ರಾಯರೆಡ್ಡಿ, ಎ.ಬಿ.ಪಾಟೀಲ, ಬಿ.ಆರ್.ಪಾಟೀಲ, ಅಶೋಕ್ ಖೇಣಿ (ಉಪಾಧ್ಯಕ್ಷರು). ರಾಜ್ಯ ಸಮಿತಿ ಅಧ್ಯಕ್ಷರಾಗಿ ಡಾ.ಶರಣ ಪ್ರಕಾಶ ಪಾಟೀಲ ನೇಮಕಗೊಂಡಿದ್ದಾರೆ. ಡಾ.ಸಿ.ಜಯಣ್ಣ(ಪ್ರಧಾನ ಕಾರ್ಯದರ್ಶಿ), ರಾಜಶೇಖರ ಪಾಟೀಲ, ಅಲ್ಲಂ ಪ್ರಭು ಪಾಟೀಲ, ನಂಜಪ್ಪ, ಎನ್.ಕೆ.ಖೇಡ್, ಶಿವಾನಂದ ಬೆಲ್ಲದ್, ಎಸ್.ಎಂ.ನಾಗರಾಜ್, ಎಚ್.ಎಂ.ಚಂದ್ರಶೇಖರ್, ನಂದ್ಯಾಲ ಹಾಲಪ್ಪ(ಉಪಾಧ್ಯಕ್ಷರು)ಹಾಗೂ ಇತರೆ 15 ಮಂದಿ ಪ್ರಧಾನ ಕಾರ್ಯದರ್ಶಿಗಳಾಗಿದ್ದಾರೆ.