ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ಕೊಲೆ: ಯುವಕನ ಬಂಧನ
ಬೆಂಗಳೂರು, ಜ.25: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನು ಕೊಲೆಗೈದಿರುವ ಪ್ರಕರಣ ಸಂಬಂಧ ಯುವಕನೊಬ್ಬನನ್ನು ಇಲ್ಲಿನ ಕೊಡಿಗೇಹಳ್ಳಿ ಠಾಣಾ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಬಂಧಿತ ಆರೋಪಿ ಚನ್ನಪಟ್ಟಣ ತಾಲೂಕಿನ ತೂಬಿನಗೆರೆ ನಿವಾಸಿ ರವಿ ಆರ್.(30) ಎಂದು ಪೊಲೀಸರು ತಿಳಿಸಿದ್ದು, ಆರೋಪಿಯು ತನ್ನ ಸ್ನೇಹಿತ ಅನಿಲ್ ಎಂಬಾತನನ್ನು ಜ.21ರಂದು ಕೊಲೆ ಮಾಡಿ ಹೆಬ್ಬಾಳ ಕೆರೆ ಕೋಡಿಯ ಸೇತುವೆ ಬಳಿ ಬಿಸಾಡಿ ಪರಾರಿಯಾಗಿದ್ದ ಎಂದು ತಿಳಿದುಬಂದಿದೆ.
ಬಂಧಿತ ಆರೋಪಿಯಾಗಿರುವ ರವಿ ಹಾಗೂ ಕೊಲೆಯಾದ ಅನಿಲ್ ಇಬ್ಬರೂ ಗಂಗಾನಗರದ ಸಿಬಿಐ ಕಚೇರಿ ಬಳಿ ಸಂಜೆ ವೇಳೆ ಆಟೊ ರಿಕ್ಷಾದಲ್ಲಿ ಗೋಬಿ ಮಂಚೂರಿ ಮಾರಾಟ ಮಾಡುವ ಹರೀಶ್ ಎಂಬವವರ ಮೊಬೈಲ್ ಕ್ಯಾಂಟೀನ್ನಲ್ಲಿ ಕೆಲಸ ಮಾಡುತ್ತಿದ್ದರು.
ಇಬ್ಬರೂ ಒಟ್ಟಿಗೆ ಗಂಗಾನಗರದಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದರು. ಕೊಲೆಯಾದ ಅನಿಲ್ ಆರೋಪಿ ರವಿಗೆ ಪ್ರತಿನಿತ್ಯವೂ ನಿಂದನೆ ಮಾಡುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತು ರವಿ, ಅನಿಲ್ ಜತೆ ಜಗಳವಾಡಿ, ಕುತ್ತಿಗೆ ಹಿಸುಕಿ ಕೊಲೆ ಮಾಡಿ ನಂತರ ಶವವನ್ನು ಚೀಲಕ್ಕೆ ತುಂಬಿ, ಮೂಟೆ ಕಟ್ಟಿಕೊಂಡು ಆಟೊದಲ್ಲಿ ಹೋಗಿ ಹೆಬ್ಬಾಳ ಕೆರೆ ಕೋಡಿ ಬಳಿ ಬಿಸಾಡಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಗಿರೀಶ್ ತಿಳಿಸಿದರು.
ಪ್ರಕರಣ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಕೊಡಿಗೇಹಳ್ಳಿ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.