ಹೂಕುಂಡದಲ್ಲಿ ಗಾಂಜಾ ಗಿಡ ಬೆಳೆದ ಆರೋಪ: ಎಂಜಿನಿಯರ್ ವಿದ್ಯಾರ್ಥಿಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು
ಬೆಂಗಳೂರು,ಜ.28: ಮನೆಯ ಹೂ ಕುಂಡದಲ್ಲಿ ಗಾಂಜಾ ಗಿಡ ಬೆಳೆದ ಆರೋಪದ ಮೇಲೆ ಎರಡು ತಿಂಗಳಿನಿಂದ ಕಾರಾಗೃಹದಲ್ಲಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಗೆ ಹೈಕೊರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಈ ಕುರಿತಂತೆ ಬಂಟ್ವಾಳ ತಾಲೂಕಿನ ಜೊಷುವಾ ಡಿಸೊಜ ಎಂಬ ಮೊದಲ ವರ್ಷದ ಮೆಕಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದೆ.
ಅರ್ಜಿದಾರರು 50 ಸಾವಿರ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಇಷ್ಟೇ ಮೊತ್ತಕ್ಕೆ ಒಬ್ಬ ವ್ಯಕ್ತಿಯ ಭದ್ರತೆ ಒದಗಿಸಬೇಕು ಎಂದು ಷರತ್ತು ವಿಧಿಸಲಾಗಿದೆ.
ಪ್ರಕರಣವೇನು: ಜೊಷುವಾ ಮುನ್ನೂರು ಗ್ರಾಮದ ಕುತ್ತಾರ್ ಬಳಿಯ ಸಂತೋಷ್ ನಗರದಲ್ಲಿರುವ ಮನೆಯಲ್ಲಿ ಗಾಂಜಾ ಗಿಡ ಬೆಳೆದಿದ್ದಾರೆ ಎಂಬ ಮಾಹಿತಿ ಆಧಾರದ ಮೇರೆಗೆ ಅಪರಾಧ ಮತ್ತು ಮಾದಕ ದ್ರವ್ಯ ಅಪರಾಧ ವಿಭಾಗದ ಪೊಲೀಸರು ದಾಳಿ ನಡೆಸಿದ್ದರು. ದಾಳಿಯ ವೇಳೆ ಮನೆಯ ಹೂ ಕುಂಡದಲ್ಲಿ ಬೆಳೆದಿದ್ದ 74 ಗ್ರಾಂ ತೂಕದ ಎರಡು ಗಾಂಜಾ ಗಿಡ, 8 ಗ್ರಾಂ ತೂಕದ ಗಾಂಜಾ ಬೀಜಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಗಿಡಗಳ ಮೌಲ್ಯ 2 ಸಾವಿರ ಎಂದು ಅಂದಾಜಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜೊಷುವಾ ಡಿಸೊಜಾ ವಿರುದ್ಧ ನಶೀಲಿ ಪದಾರ್ಥ ಮತ್ತು ಮನಸ್ಸಿನ ಪರಿಣಾಮ ಉಂಟುಮಾಡುವ ವಸ್ತುಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ 2017 ರನವೆಂಬರ್ 7 ರಂದು ಬಂಧಿಸಿದ್ದರು.