ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆ : ಎಸ್ಐಟಿ ಅವಧಿ ವಿಸ್ತರಣೆಗೆ ಸಚಿವರ ಆಕ್ಷೇಪ?
ಬೆಂಗಳೂರು, 31: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಿಬಿಐ ಪ್ರಾಥಮಿಕ ತನಿಖೆ ನಡೆಸಿ ಮುಕ್ತಾಯ ಮಾಡಿದ್ದ ಪ್ರಕರಣಗಳನ್ನು ಎಸ್ಐಟಿಗೆ ವಹಿಸಿರುವ ರಾಜ್ಯ ಸರಕಾರವು, ತನಿಖೆಯ ಕಾಲಾವಧಿಯನ್ನು ಒಂದು ವರ್ಷ ವಿಸ್ತರಿಸಿರುವುದಕ್ಕೆ ಕೆಲ ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿದ ಸಚಿವರು, ಜ.24ಕ್ಕೆ ಅಂತ್ಯಗೊಂಡಿರುವ ಎಸ್ಐಟಿ ತನಿಖೆಯ ಕಾಲಾವಧಿಯನ್ನು ಒಂದು ವರ್ಷದ ಬದಲು ಮೂರು ತಿಂಗಳಿಗೆ ಇಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಎಸ್ಐಟಿ ಮೂರು ತಿಂಗಳಲ್ಲಿ ವರದಿ ನೀಡಿದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರಬಲ ಅಸ್ತ್ರ ಸಿಕ್ಕಿದಂತಾಗುತ್ತದೆ ಎಂದು ಸಚಿವರು ಮಾಡಿದ ವಾದವನ್ನು ಆಲಿಸಿದ ಮುಖ್ಯಮಂತ್ರಿ, ಇಷ್ಟು ಕಡಿಮೆ ಅವಧಿಯಲ್ಲಿ ಅಕ್ರಮ ಗಣಿಗಾರಿಕೆಯ ಎಲ್ಲ ಪ್ರಕರಣಗಳ ತನಿಖೆ ನಡೆಸಿ ವರದಿ ಪಡೆದುಕೊಳ್ಳುವುದು ಅಸಾಧ್ಯ. ತನಿಖೆಗೆ ಕನಿಷ್ಠ ಒಂದು ವರ್ಷ ಅವಧಿ ಬೇಕಾಗುತ್ತದೆ ಎಂದು ಸಚಿವರ ಮನವೊಲಿಸಿದರು ಎನ್ನಲಾಗಿದೆ.