ಪದವಿ ಪ್ರಮಾಣ ಪತ್ರ ಕನ್ನಡದಲ್ಲೇ ಮುದ್ರಿಸಿ: ಪ್ರೊ.ಎಸ್.ಜಿ.ಸಿದ್ದರಾಮಯ್ಯ
ಬೆಂಗಳೂರು, ಫೆ. 1: ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ತನ್ನ ವಿದ್ಯಾರ್ಥಿಗಳಿಗೆ ವಿತರಿಸುತ್ತಿರುವ ಪದವಿ ಪ್ರಮಾಣದಲ್ಲಿ ಕನ್ನಡ ಭಾಷೆಯನ್ನು ಮುದ್ರಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಈ ಸಂಬಂಧ ಸಂಸ್ಥೆಯ ನಿರ್ದೇಶಕ ಪ್ರೊ.ಜಿ.ರಘುರಾಮ್ ಹಾಗೂ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ಪದವಿ ಪ್ರಮಾಣ ಪತ್ರದಲ್ಲಿ ಸ್ಥಳಿಯ ಭಾಷೆ ಕನ್ನಡವನ್ನು ನಿರ್ಲಕ್ಷಿಸಿ ಹಿಂದಿ ಭಾಷೆಗೆ ಸ್ಥಾನ ಕಲ್ಪಿಸಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ.
ಐಐಎಂಬಿ ಸಂಸ್ಥೆಗೆ ರಾಜ್ಯ ಸರಕಾರ ಕೋಟ್ಯಂತರ ರೂ.ಗಳ ಮೌಲ್ಯದ ಸ್ಥಳ ಮಂಜೂರಾತಿ ನೀಡಿರುವುದಲ್ಲದೆ, ಈ ಸಂಸ್ಥೆಯು ಇಲ್ಲಿನ ಜನಸಾಮಾನ್ಯರೊಂದಿಗೆ ಭಾವನಾತ್ಮಕ ಸಂಪರ್ಕ ಹೊಂದಿದೆ. ಈ ಕಾರಣಕ್ಕಾಗಿ ಸಂಸ್ಥೆ ತನ್ನ ಕರ್ನಾಟಕದ ಬಗೆಗಿನ ಬದ್ಧತೆಯನ್ನು ಪ್ರದರ್ಶಿಸಬೇಕಾಗಿದೆ ಎಂದ ಕೋರಿದ್ದಾರೆ.
Next Story