ಬಜೆಟ್ನಲ್ಲಿ ವಿಕಲಚೇತನರ ಮಾಸಾಶನ ಹೆಚ್ಚಳಕ್ಕೆ ಆಗ್ರಹ
ಬೆಂಗಳೂರು, ಫೆ.1: ರಾಜ್ಯ ಸರಕಾರ ಮಂಡಿಸಲಿರುವ ಮುಂದಿನ ಬಜೆಟ್ನಲ್ಲಿ ಅಂಗವಿಕಲರಿಗೆ ನೀಡುತ್ತಿರುವ ಮಾಸಾಶನವನ್ನು ಹೆಚ್ಚಳ ಮಾಡಬೇಕು ಎಂದು ಅಂಗವಿಕಲರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಅಧ್ಯಕ್ಷ ಜಿ.ಎನ್.ನಾಗರಾಜ್, ಕೇಂದ್ರ ಸರಕಾರ ಮಂಡಿಸಿದ ಬಜೆಟ್ನಲ್ಲಿ ಅಂಗವಿಕಲರಿಗೆ ನೀಡುವ ಮಾಸಾಶನವನ್ನು ಕೇವಲ 300 ರೂ.ಗಳಷ್ಟು ಏರಿಕೆ ಮಾಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ರಾಜ್ಯ ಸರಕಾರ ಶೇ.40 ರಷ್ಟು ಅಂಗವಿಕಲತೆಯುಳ್ಳವರಿಗೆ 200 ರೂ.ಗಳು ಹಾಗೂ ಶೇ.75 ರಷ್ಟು ಅಂಗವಿಕಲತೆಯುಳ್ಳವರಿಗೆ 900 ರೂ.ಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಹೀಗಾಗಿ, ರಾಜ್ಯ ಸರಕಾರ ಮಂಡಿಸಲಿರುವ ರಾಜ್ಯ ಬಜೆಟ್ನಲ್ಲಿ ಶೇ.40 ರಷ್ಟು ಅಂಗವಿಕಲತೆಯುಳ್ಳವರಿಗೆ ಮೂರು ಸಾವಿರ ಹಾಗೂ ಶೇ.75 ರಷ್ಟು ಅಂಗವಿಕಲತೆಯುಳ್ಳವರಿಗೆ ಐದು ಸಾವಿರ ಹಾಗೂ ಎರಡೂ ವರ್ಗದ ಮಹಿಳೆಯರಿಗೆ ಹೆಚ್ಚುವರಿಯಾಗಿ 1 ಸಾವಿರ ರೂ.ಗಳಷ್ಟು ಹೆಚ್ಚಳ ಮಾಡಿ ನಿಗದಿಪಡಿಸಬೇಕು. ಇದರಲ್ಲಿ ಕೇಂದ್ರ ಸರಕಾರ ಶೇ.20 ರಷ್ಟು ಹಾಗೂ ರಾಜ್ಯ ಸರಕಾರ ಶೇ.50 ರಷ್ಟು ನೀಡಬೇಕು. ಹಾಗೂ ವಯಸ್ಕ ಅಂಗವಿಕಲರು ಸೇರಿದಂತೆ ಎಲ್ಲ ಅಂಗವಿಕಲರಿಗೂ ಉದ್ಯೋಗ, ಶಿಕ್ಷಣ, ಆರೋಗ್ಯ ಮತ್ತಿತರ ಬದುಕಿನ ಅಗತ್ಯಗಳಿಗಾಗಿ ಅಂಗವಿಕಲರ ಸಮಗ್ರ ಕಲ್ಯಾಣ ಯೋಜನೆಯನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.
ಭ್ರಷ್ಟಾಚಾರಕ್ಕೆ ಕಡಿವಾಣ ಅಗತ್ಯ: ರಾಜ್ಯದಲ್ಲಿ ಅಂಗವಿಕಲರಿಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿರುವ ಕೆಲವು ಸಂಸ್ಥೆಗಳು ಭ್ರಷ್ಟಾಚಾರ ಕೂಪದಲ್ಲಿ ಮುಳುಗಿ ಹೋಗಿವೆ. ಕೇಂದ್ರ ಮತ್ತು ರಾಜ್ಯ ಸರಕಾರದ ಬಜೆಟ್ನಿಂದ ನೀಡಲಾಗುವ ಹಣವನ್ನು ಮತ್ತು ಖಾಸಗಿ ಕಾರ್ಪೋರೇಟ್ ಸಂಸ್ಥೆಗಳು, ದಾನಿಗಳು ನೀಡುವ ಹಣವನ್ನು ದುರ್ಬಳಕೆ ಮಾಡಿಕೊಂಡು ಅಂಗವಿಕಲರಿಗೆ ಅನ್ಯಾಯ ಮಾಡುತ್ತಿವೆ. ಇತ್ತೀಚಿಗೆ ವರದಿಯಾದಂತೆ ವಿದ್ಯಾರಣ್ಯ ಎಜುಕೇಷನ್ ಸೊಸೈಟಿ ಎಂಬ ಸಂಸ್ಥೆಯಲ್ಲಿದ್ದ ಬುದ್ಧಿಮಾಂದ್ಯ ಮಕ್ಕಳನ್ನು ಬ್ರೈಟ್ ಸಂಸ್ಥೆ ಹಾಗೂ ಎಲ್ಎನ್ಆರ್ ಎಂಟರ್ಪ್ರೈಸಸ್ನ ಇಬ್ಬರು ವ್ಯಕ್ತಿಗಳು ಒಂದು ದಿನಕ್ಕೆ ಒಂದು ಮಗುವಿಗೆ 1500 ಹಣ ನೀಡಿ ಚಿಕ್ಕಮಗಳೂರಿನ ಸಂಸ್ಥೆಗೆ ಕಳುಹಿಸಲು ಸಿದ್ಧತೆ ನಡೆಸಿದ್ದರು. ಅವರನ್ನು ಬಂಧಿಸಲಾಗಿತ್ತು ಎಂದು ನಾಗರಾಜ್ ಹೇಳಿದರು.
ಆಯುಕ್ತರ ನೇಮಕಕ್ಕೆ ಆಗ್ರಹ: ಅಂಗವಿಕಲರ ಅಭಿವೃದ್ಧಿಗಾಗಿ ಹಾಗೂ ಅವರ ಹಕ್ಕುಗಳನ್ನು ಸರಿಯಾದ ಸಮಯಕ್ಕೆ ಅರ್ಹರಿಗೆ ತಲುಪಿಸುವ ನಿಟ್ಟಿನಲ್ಲಿ ಸರಕಾರ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ ಆಯುಕ್ತ ಹುದ್ದೆ ಸೃಷ್ಟಿಸಿದೆ. ಆದರೆ, ಎರಡು ವರ್ಷಗಳಿಂದ ಈ ಹುದ್ದೆಯನ್ನು ಭರ್ತಿ ಮಾಡದೇ ಅಂಗವಿಕಲರಿಗೆ ಅನ್ಯಾಯ ಎಸಗಲಾಗಿದೆ. ಅಲ್ಲದೆ, ಈ ಹುದ್ದೆಯ ಮೇಲೆ ಭ್ರಷ್ಟರು ಕಣ್ಣಿಟ್ಟಿದ್ದು, ರಾಜ್ಯ ಸರಕಾರ ಪ್ರಾಮಾಣಿಕ, ದಕ್ಷ ಹಾಗೂ ಅಂಗವಿಕಲರ ಕುರಿತು ಕಾಳಜಿಯಿರುವ ವ್ಯಕ್ತಿಯನ್ನು ನೇಮಕ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ವಿಕಲಚೇತನರ ರಕ್ಷಣಾ ಸಮಿತಿ ಕಾರ್ಯಾಧ್ಯಕ್ಷ ಚಂದ್ರಶೇಖರ ಪುಟ್ಟಪ್ಪ, ಅಧ್ಯಕ್ಷ ಎಸ್.ರಫೀಕ್ ಅಹಮದ್, ದಿ ಅಸೋಸಿಯೇಷನ್ ಫಾರ್ ಪೀಪಲ್ ವಿತ್ ಡಿಸಬಿಲಿಟಿ ಸಂಸ್ಥೆಯ ಅಡ್ವೊಕೆಸಿ ಎಂ.ಟಿ.ರಶ್ಮಿ, ದಿ ಇಂಡಿಯನ್ ಫಿಸಿಕಲಿ ಹ್ಯಾಂಡಿಕ್ಯಾಪ್ಟ್ ವೆಲ್ಫೇರ್ ಅಸೋಸಿಯೇಷನ್ನ ಅಧ್ಯಕ್ಷ ರುದ್ರಸ್ವಾಮಿ ಉಪಸ್ಥಿತರಿದ್ದರು.