ಮಹಾದಾಯಿ ಬಗ್ಗೆ ಮೋದಿ ಮಾತನಾಡುವ ಸಾಧ್ಯತೆಯಿಲ್ಲ: ಯಡಿಯೂರಪ್ಪ ಸುಳಿವು
ಬೆಂಗಳೂರು, ಫೆ.2: ‘‘ರವಿವಾರ(ಫೆ.4) ಬೆಂಗಳೂರಿಗೆ ಪರಿವರ್ತನಾ ರ್ಯಾಲಿಯಲ್ಲಿ ಭಾಗವಹಿಸಲು ಆಗಮಿಸಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ ಮಂಡನೆಯಾಗಿರುವ ಬಜೆಟ್ ಸಹಿತ ಇತರ ವಿಷಯಗಳ ಬಗ್ಗೆ ಮಾತನಾಡಬಹುದು. ಮಹಾದಾಯಿ ನದಿ ನೀರಿನ ವಿವಾದದ ಬಗ್ಗೆ ಮಾತನಾಡುವ ಸಾಧ್ಯತೆಯಿಲ್ಲ’’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸುಳಿವು ನೀಡಿದ್ದಾರೆ.
ಅರಮನೆ ಮೈದಾನದಲ್ಲಿ ನಡೆಯಲಿರುವ ಪರಿವರ್ತನಾ ರ್ಯಾಲಿ ಸಮರೋಪ ಸಮಾರಂಭದ ಸಿದ್ಧತೆಯ ಬಗ್ಗೆ ಪರಿಶೀಲಿಸಿದ ಯಡಿಯೂರಪ್ಪ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಚಾರ ತಿಳಿಸಿದರು.
ಮಹಾದಾಯಿ ನದಿ ನೀರಿನ ವಿವಾದ ಬಗೆಹರಿಸಲು ಪ್ರಧಾನಮಂತ್ರಿ ಮಧ್ಯಪ್ರವೇಶಿಸಬೇಕೆಂದು ಆಡಳಿತರೂಢ ಕಾಂಗ್ರೆಸ್, ವಿಪಕ್ಷ ಜೆಡಿಎಸ್ ಹಾಗೂ ಮಹಾದಾಯಿ ನೀರು ನೀರಿಗಾಗಿ ಹೋರಾಟ ನಡೆಸುತ್ತಿರುವ ಸಂಘಟನೆಗಳು, ಹೋರಾಟಕ್ಕೆ ಬೆಂಬಲ ನೀಡುತ್ತಿರುವ ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಪರ ಸಂಘಟನೆಗಳು ಆಗ್ರಹಿಸುತ್ತಿವೆ. ವಾಟಾಳ್ ನಾಗರಾಜ್ ಪ್ರಧಾನಿ ಆಗಮನದ ದಿನ ಬೆಂಗಳೂರು ಬಂದ್ ನಡೆಸುವುದಾಗಿ ಎಚ್ಚರಿಕೆ ನೀಡಿದ್ದು ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.