ಕರ್ನಾಟಕವನ್ನು ದೇಶದಲ್ಲೇ ಉತ್ತಮ ರಾಜ್ಯವನ್ನಾಗಿಸೋಣ: ವಜುಭಾಯಿ ವಾಲಾ
ಬೆಂಗಳೂರು, ಫೆ. 5: ‘ಕರ್ನಾಟಕವು ಸದಾ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದು, ಭವಿಷ್ಯದಲ್ಲಿ ಇದೇ ಹಾದಿಯಲ್ಲಿ ಮತ್ತಷ್ಟು ಸಾಧನೆ ಮಾಡಲಿ. ನಾವೆಲ್ಲರೂ ಒಟ್ಟಾಗಿ ಶ್ರಮಿಸಿ, ಕರ್ನಾಟಕವನ್ನು ಭಾರತದಲ್ಲಿಯೇ ಉತ್ತಮ ರಾಜ್ಯವನ್ನಾಗಿಸೋಣ’ ಎಂದು ರಾಜ್ಯಪಾಲ ವಜುಭಾಯಿ ವಾಲಾ ಕರೆ ನೀಡಿದ್ದಾರೆ.
ಸೋಮವಾರ ವಿಧಾನಮಂಡಲ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಎಲ್ಲ ಜನರ ದೃಷ್ಟಿ ಕರ್ನಾಟಕದ ಮೇಲಿರುವುದರಿಂದ, ವಿಧಾನ ಮಂಡಲದ ಸದಸ್ಯರು ರಚನಾತ್ಮಕ ಹಾದಿಯನ್ನು ತಮ್ಮದಾಗಿಸಿಕೊಂಡು ವಿಸ್ತೃತ ಮತ್ತು ಗಹನ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ ಎಂದು ಸಲಹೆ ನೀಡಿದರು.
‘ನನ್ನ ಸರಕಾರವು ಬಡವರು, ದುರ್ಬಲ ವರ್ಗದವರು ಮತ್ತು ಅವಕಾಶ ವಂಚಿತರ ಕಲ್ಯಾಣ ಮತ್ತು ಅಭಿವೃದ್ಧಿಗೆ ಬದ್ಧವಾಗಿದೆ ಎಂಬುವುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಐದು ವರ್ಷಗಳಲ್ಲಿ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವಲ್ಲಿ ಮತ್ತು ಸಮಾಜದ ಎಲ್ಲ ವರ್ಗದವರಿಗೂ ಸಾಮಾಜಿಕ ನ್ಯಾಯ ದೊರಕಿಸುವಲ್ಲಿ ಗಮನಾರ್ಹ ಹೆಜ್ಜೆ ಇರಿಸಿದೆ. ಹಸಿವು ಮುಕ್ತ ಕರ್ನಾಟಕದ ಗುರಿ ತಲುಪುವಲ್ಲಿ ಉತ್ತಮ ಪ್ರಗತಿ ಸಾಧಿಸಿದೆ ಎಂದು ತಿಳಿಸಿದರು.
ಪ್ರಗತಿಯ ಹಾದಿಯಲ್ಲಿ: ಐದು ವರ್ಷಗಳಲ್ಲಿ ನನ್ನ ಸರಕಾರವು, ಸತತವಾಗಿ ರಾಜಸ್ವ ಹೆಚ್ಚುವರಿ ಉಳಿಸಿಕೊಂಡು ಬಂದಿದ್ದು, ಆರ್ಥಿಕ ಕೊರತೆಯನ್ನು ರಾಜ್ಯ ಆಂತರಿಕ ಒಟ್ಟು ಉತ್ಪನ್ನದ (ಜಿಎಸ್ಡಿಪಿ) ಶೇ.3ಕ್ಕಿಂತ ಕಡಿಮೆ ಹಾಗೂ ಒಟ್ಟಾರೆ ಹೊಣೆಗಾರಿಕೆಯನ್ನು ಜಿಎಸ್ಡಿಪಿ ಶೇ.25ರೊಳಗೆ ಇರುವಂತೆ ಖಚಿತಪಡಿಸಿಕೊಳ್ಳುವ ಮೂಲಕ ವಿತ್ತೀಯ ಜವಾಬ್ದಾರಿ ಅಧಿನಿಯಮದ ಎಲ್ಲ ಅಗತ್ಯತೆಗಳನ್ನು ಪೂರೈಸಿದೆ. ಈ ವರ್ಷವೂ, ಪ್ರಮುಖ ತೆರಿಗೆಗಳ ರಾಜಸ್ವ ಸ್ವೀಕೃತಿಗಳು ಹೆಚ್ಚು ಕಡಿಮೆ ಆಯವ್ಯಯದ ಅಂದಾಜಿನಂತಿರುವುದರಿಂದ, ರಾಜ್ಯವು ಇದುವರೆಗೆ ಸಾಧಿಸಿರುವ ಪ್ರಗತಿಯನ್ನು ಮುಂದುವರೆಸುವ ನಿರೀಕ್ಷೆ ಇದೆ ಎಂದು ವಜುಭಾಯಿ ವಾಲಾ ವಿಶ್ವಾಸ ವ್ಯಕ್ತಪಡಿಸಿದರು.
ನಷ್ಟ ಪರಿಹಾರದ ನಿರೀಕ್ಷೆ: ಜಿಎಸ್ಟಿ ಅನುಷ್ಠಾನಗೊಳಿಸಲು ನಾವು ಸಂಪೂರ್ಣ ಸಿದ್ಧರಿದ್ದರೂ, ಜಿಎಸ್ಟಿಯಡಿಯಲ್ಲಿ ರೂಪಿಸಿರುವ ಕಾನೂನು ಅವಶ್ಯಕತೆಗಳನ್ನು ಐಟಿ ವೇದಿಕೆಯಲ್ಲಿ ಪೂರೈಸುವಲ್ಲಿ ತೆರಿಗೆದಾರರು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇದರ ಜೊತೆಗೆ ಪ್ರಾರಂಭಿಕ ತಿಂಗಳುಗಳಲ್ಲಿ ಆಗಾಗ ಬದಲಾವಣೆಯಾಗುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ಈ ಕಾರಣಗಳಿಂದಾಗಿ ಸದ್ಯಕ್ಕೆ ಜಿಎಸ್ಟಿ ಸಂಗ್ರಹಣೆಯಲ್ಲಿ ಏರಿಳಿತವಾಗುತ್ತಿದೆ. ಆದರೆ, ಅಧಿನಿಯಮದ ಅನುಸಾರ, ಕೇಂದ್ರದಿಂದ ಬರಬೇಕಾದ ನಷ್ಟ ಪರಿಹಾರದ ಮೂಲಕ ಕೊರತೆಯನ್ನು ನೀಗಿಸಬಹುದು ಎಂದು ನಿರೀಕ್ಷಿಸಲಾಗಿದೆ. ರಾಜ್ಯವು, ಕೆಲ ವರ್ಷಗಳಿಂದ ಬಾಕಿ ಇರುವ ಅನೇಕ ವಸ್ತುಗಳ ಬೆಲೆಗಳನ್ನು ಪರಿಷ್ಕರಿಸುವ ಕಾರ್ಯವನ್ನು ಕೈಗೊಂಡಿದ್ದು, ಇಲಾಖೆಗಳೊಂದಿಗೆ ತೆರಿಗೆಯೇತರ ಸಂಗ್ರಹಣೆಗಳನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಇಂತಹ ಕ್ರಮಗಳು ರಾಜ್ಯದ ಆರ್ಥಿಕತೆಗೆ ಲಾಭ ತರಲಿವೆ ಎಂದರು.
1.3ಲಕ್ಷ ಮಂದಿಗೆ ಉದ್ಯೋಗ: ರಾಜ್ಯದ ನೂತನ ಜವಳಿ ನೀತಿ 2013-18ನ್ನು ಘೋಷಣೆ ಮಾಡಿದೆ. ಈ ನೀತಿಯ ಅವಧಿಯಲ್ಲಿ, 4,954 ಕೋಟಿ ರೂ. ಹೂಡಿಕೆಯ 844 ಎಂಎಸ್ಎಂಇ, ಮೆಗಾ ಜವಳಿ ಪಾರ್ಕ್ಗಳನ್ನು ಸ್ಧಾಪಿಸಲಾಗಿದೆ. 1.3ಲಕ್ಷ ಜನರಿಗೆ ಉದ್ಯೋಗ ಒದಗಿಸಿದೆ ಎಂದು ಅವರು ನುಡಿದರು.
ಹೂಡಿಕೆಯಲ್ಲಿ ಪ್ರಥಮ ಸ್ಥಾನ: ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ 2013ರಲ್ಲಿ 11ನೆ ಸ್ಥಾನದಿಂದ 2016 ಮತ್ತು 2017ರಲ್ಲಿ ರಾಷ್ಟ್ರದಲ್ಲಿ ಪ್ರಥಮ ಸ್ಥಾನಕ್ಕೇರಿದೆ. 2014-19ರ ಕೈಗಾರಿಕಾ ನೀತಿಯನ್ವಯ ರಾಜ್ಯದಲ್ಲಿ 5 ಲಕ್ಷ ಕೋಟಿ ರೂ.ಬಂಡವಾಳ ಹೂಡಿಕೆ ಆಕರ್ಷಿಸಿದ್ದು, 15ಲಕ್ಷ ಉದ್ಯೋಗವನ್ನು ಸೃಷ್ಟಿಸುವ ಗುರಿ ಹೊಂದಿದೆ. ನಾಲ್ಕೂವರೆ ವರ್ಷಗಳಲ್ಲಿ, 3.39ಲಕ್ಷ ಕೋಟಿ ರೂ.ಬಂಡವಾಳ ಹೂಡಿಕೆ ಮತ್ತು 9.45 ಲಕ್ಷ ವ್ಯಕ್ತಿಗಳಿಗೆ ಸಮರ್ಥ ಉದ್ಯೋಗಗಳನ್ನು ಒದಗಿಸುವ ನಿಟ್ಟಿನಲ್ಲಿ 1,869 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ನಾಲ್ಕೂವರೆ ವರ್ಷಗಳಲ್ಲಿ ಬೃಹತ್ ಕೈಗಾರಿಕಾ ವಲಯದಲ್ಲಿ 1.89ಲಕ್ಷ ಉದ್ಯೋಗ ಮತ್ತು ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಗಳಲ್ಲಿ 11.36 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಅಂದರೆ, ಒಟ್ಟಾರೆ 13.25 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ಅವರು ಅಂಕಿ-ಅಂಶಗಳನ್ನು ನೀಡಿದರು.
ನನ್ನ ಸರಕಾರವು ವಿದ್ಯುತ್ ವಾಹನ ಮತ್ತು ಇಂಧನ ಸಂಗ್ರಹಣಾ ನೀತಿಯನ್ನು ಅನಾವರಣ ಮಾಡುವುದರಲ್ಲಿ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಈಗಾಗಲೇ, ಈ ಉದಯೋನ್ಮುಖ ವಲಯದಲ್ಲಿ ಬಂಡವಾಳ ಹೂಡಿಕೆಗಾಗಿ ವಿಚಾರಣೆಗಳು ಬಂದಿರುತ್ತವೆ ಮತ್ತು ತ್ವರಿತಗತಿಯಲ್ಲಿ ಸೌಲಭ್ಯಗಳನ್ನು ಒದಗಿಸುವ ಮೂಲಕ ರಾಜ್ಯವು ಮೊದಲ ಬಾರಿಗೆ ಪ್ರಯೋಜನ ಪಡೆದಂತಾಗಲಿದೆ ಎಂದು ಅವರು ಹೇಳಿದರು.
‘ವೇಗವಾಗಿ ಬೆಳೆಯುತ್ತಿರುವ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನದ ವಲಯಗಳಲ್ಲಿ ಕರ್ನಾಟಕವು ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿ ಮುಂದುವರೆದಿದೆ. ‘ಕರ್ನಾಟಕ ಐ-4 ನೀತಿ’ ಮತ್ತು ‘ಬಹುವಲಯ ನವೋದ್ಯಮ ನೀತಿ’ಯನ್ನು ಘೋಷಿಸಿದ್ದು, ರಾಜ್ಯದಲ್ಲಿನ ವಿವಿಧ ಸ್ಥಳಗಳಲ್ಲಿ ಇನ್ಕ್ಯುಬೇಷನ್ ಸೆಂಟರ್ಗಳನ್ನು ಮತ್ತು ಐಟಿ ಪಾರ್ಕ್ಗಳನ್ನು ಸ್ಥಾಪಿಸಲಾಗಿದೆ’
-ವಜುಭಾಯಿ ವಾಲಾ, ರಾಜ್ಯಪಾಲ