ಪತ್ರಿಕೋದ್ಯಮದ ಮೌಲ್ಯ ಮರೆತ ಪತ್ರಕರ್ತರು: ಸಂತೋಷ್ ಹೆಗ್ಡೆ
ಬೆಂಗಳೂರು, ಫೆ.7: ಪತ್ರಿಕೋದ್ಯಮದ ಮೌಲ್ಯಗಳನ್ನೇ ಮರೆತ ಕೆಲ ಪತ್ರಕರ್ತರು ವೃತ್ತಿ ಬದುಕು ನಡೆಸುತ್ತಿದ್ದಾರೆ ಎಂದು ಕರ್ನಾಟಕ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದರು.
ಇಲ್ಲಿನ ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಆಯೋಜಿಸಿದ್ದ ‘ನ್ಯಾಯಾಂಗ ಮತ್ತು ಪತ್ರಿಕೋದ್ಯಮ’ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗ ಮತ್ತು ಪತ್ರಿಕೋದ್ಯಮದ ಪಾತ್ರ ಬಹುದೊಡ್ಡದು. ಆದರೆ, ಕೆಲವರು ಪತ್ರಿಕೋದ್ಯಮದ ಧ್ಯೇಯವನ್ನು ಮರೆತಿದ್ದಾರೆ ಎಂದರು.
ಸಮಾಜ ವರ್ತಮಾನದ ಬಗ್ಗೆ ಮಾಧ್ಯಮಗಳು ತಿಳಿಸುವ ಅಗತ್ಯವಿದೆ. ಸಮಾಜದ ಮೌಲ್ಯಗಳು ಕುಸಿತಗೊಳ್ಳದಂತೆ ನೋಡಿಕೊಳ್ಳಬೇಕಾಗಿದೆ ಎಂದ ಅವರು, ಬದ್ಧತೆ, ಮಾನವೀಯ ಕೊರತೆ ಮತ್ತು ಅತಿಯಾಸೆ ಭ್ರಷ್ಟಾಚಾರಕ್ಕೆ ಕಾರಣವಾಗಿದ್ದು, ಪ್ರಾಮಾಣಿಕತೆ ಕಡಿಮೆಯಾಗಿದೆ ಎಂದು ಹೇಳಿದರು.
ಮಕ್ಕಳಿಗೆ ಮನೆಯಿಂದಲೇ ಒಳ್ಳೆಯ ಮಾರ್ಗದರ್ಶನ, ಬದ್ಧತೆ, ನಿಷ್ಠೆಯ ಅರಿವು ದೊರೆಯದಿದ್ದರೆ, ದೇಶ ಭ್ರಷ್ಟಾಚಾರದಿಂದ ಮುಕ್ತಗೊಳ್ಳಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಲೋಕಾಯುಕ್ತ ಹುದ್ದೆಯಿಂದ ನಿವೃತ್ತಿ ಹೊಂದಿದ ನಂತರ, ಸುಮಾರು 1500ಕ್ಕೂ ಹೆಚ್ಚು ಶಾಲಾ, ಕಾಲೇಜು, ಸಂಘ-ಸಂಸ್ಥೆಗಳಿಗೆ ಹೋಗಿ ವಿದ್ಯಾರ್ಥಿಗಳೊಂದಿಗೆ ಮುಕ್ತವಾಗಿ ಭ್ರಷ್ಟಾಚಾರ ತೊಲಗಿಸುವ ಕುರಿತು ಸಂವಾದ ನಡೆಸಿದ್ದೇನೆ ಎಂದರು.
ತೃಪ್ತಿ ಮತ್ತು ಮಾನವೀಯ ಮೌಲ್ಯಗಳನ್ನು ನಾವು ಕಳೆದುಕೊಂಡಿದ್ದೇವೆ. ರಸ್ತೆ ಅಪಘಾತವಾದಾಗ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸುವಂತಹ ಮಾನವೀಯತೆ ನಮ್ಮಲ್ಲಿಲ್ಲ. ಮಾಡಿದ ಕೆಲಸಕ್ಕೆ ಸಿಗುವ ಸಂಬಳದಲ್ಲಿ ನಮಗೆ ತೃಪ್ತಿ ಇಲ್ಲ. ಶ್ರಮಿಕರ ಬೆವರಿನ ಹಣ ಕಿತ್ತುಕೊಳ್ಳುವುದರಲ್ಲೇ ಸಂತೋಪ ಪಡುತ್ತಿರುವುದು ದುರಾದೃಷ್ಟಕರ ಎಂದು ಸಂತೋಷ್ ಹೆಗಡೆ ನುಡಿದರು.
ದೇಶದಲ್ಲಿ ಲಕ್ಷಾಂತರ ಕೋಟಿ ರೂ.ಮೊತ್ತದ ಹಗರಣಗಳು ನಡೆದಿವೆ. 2010ರಲ್ಲಿ ಸುಮಾರು 70 ಸಾವಿರ ಕೋಟಿ ಮೌಲ್ಯದ ಕಾಮನ್ವೆಲ್ತ್ ಹಗರಣ ನಡೆದಿದೆ. 1.85 ಲಕ್ಷ ಕೋಟಿ ರೂ.ಗಳ ಕೋಲ್ ಹಗರಣ, 1.76 ಲಕ್ಷ ಕೋಟಿ ರೂ.ಗಳ 2ಜಿ ಹಗರಣ, ಎಲ್ಐಸಿ ಹೌಸಿಂಗ್ ಲೋನ್ ಹಗರಣ ಹೀಗೆ ಹಲವು ಹಗರಣಗಳ ದೊಡ್ಡ ಪಟ್ಟಿಯೇ ಇದೆ. ಆದರೆ, ಕೆಲವೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಡೆಸಿರುವ ಭ್ರಷ್ಟಾಚಾರ ಇದಕ್ಕೂ ಮೀರಿರುವುದು ಆಘಾತ ತರುವಂತದ್ದು ಎಂದು ಹೇಳಿದರು.
ಸಂವಾದ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಪ್ರೊ.ಎಸ್.ಎನ್.ನಾಗರಾಜ ರೆಡ್ಡಿ, ಹಿರಿಯ ಪತ್ರಕರ್ತ ಭಾಸ್ಕರ್ ರಾವ್, ಕಾಲೇಜಿನ ಪ್ರಾಂಶುಪಾಲೆ ಪರಿಣಿತಾ, ಪ್ರೊ.ಡಾ.ಎಸ್.ಜಯಸಿಂಹ ಸೇರಿ ಪ್ರಮುಖರಿದ್ದರು.